ಮಡಿಕೇರಿ ಫೆ.3 : ವರ್ತಕರೊಬ್ಬರ ಮೊಬೈಲ್ ಫೋನ್ ಮೂಲಕ ಫೋನ್ ಪೇ ಮತ್ತು ಗೂಗಲ್ ಪೇ ಆಪ್ ನ್ನು ಬಳಸಿ ರೂ.4,76,456 ನ್ನು ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿಕೊಂಡ ಆರೋಪದಡಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಸಮೀಪ ಗುಡ್ಡೆಹೊಸೂರುವಿನ ಬೊಳ್ಳೂರು ಗ್ರಾಮದ ನಿವಾಸಿ ನೂತನ್ ಬಿ.ಎಂ (23) ಬಂಧಿತ ಆರೋಪಿ. ಗುಮ್ಮನಕೊಲ್ಲಿಯ ದಿನಸಿ ಅಂಗಡಿಯ ವರ್ತಕರೊಬ್ಬರ ಪುತ್ರಿ ಅನುಷಾ ಎಂಬುವವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷ ರಾಘವೇಂದ್ರ ಜೆ.ಕೆ ಹಾಗೂ ಪೊಲೀಸ್ ಉಪ ನಿರೀಕ್ಷಕ ದೇವರಾಜ್ ಹೆಚ್.ಇ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರು ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದಿರಲು ಕೊಡಗು ಜಿಲ್ಲಾ ಸೈಬರ್ ಅಪರಾಧ ವಿಭಾಗ ಮನವಿ ಮಾಡಿದೆ.














