ಮಡಿಕೇರಿ ಫೆ.3: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 36ನೇ ವರ್ಷದ ಶಾಲಾ ವಾರ್ಷಿಕೋತ್ಸವವು ವಿದ್ಯಾಲಯದಲ್ಲಿ ಸಂಭ್ರಮದಿಂದ ನಡೆಯಿತು.
ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ, ಜಿಲ್ಲೆಯ ಹಿರಿಯ ಲೇಖಕ ಕಿಗ್ಗಾಲು ಗಿರೀಶ್, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಅರ್ಜುನ್ ಸಿಂಗ್ ಹಾಗೂ ನವೋದಯ ವಿದ್ಯಾಲಯದ ಪ್ರಾಚಾರ್ಯ ಪಿ.ಒ.ಪಂಕಜಾಕ್ಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಚಾರ್ಯ ಪಿ.ಒ.ಪಂಕಜಾಕ್ಷನ್ ಶೈಕ್ಷಣಿಕ ಸಾಲಿನಲ್ಲಿ ನಡೆದ ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮತ್ತು ವಿಶೇಷ ಸಾಧನೆಗಳ ವಿವರಗಳನ್ನೊಳಗೊಂಡ ವರದಿ ಮಂಡಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ವಲಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಳೆದ ಸಾಲಿನಲ್ಲಿ ಸಿಬಿಎಸ್ಇ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನರಂಜನ ಕಾರ್ಯಕ್ರಮ ನಡೆದವು.
ಶಿಕ್ಷಣದಲ್ಲಿ ಕಲೆ ಎಂಬ ಪರಿಕಲ್ಪನೆಯನ್ನು ಆಧರಿಸಿ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಚಿತವಾದ ಕೊಡವ ನೃತ್ಯರೂಪಕವು ಪ್ರದರ್ಶಿತಗೊಂಡವು. ಈ ನೃತ್ಯ ರೂಪಕ್ಕೆ ಒಂದು ತಿಂಗಳು ತರಬೇತಿ ನೀಡಿದ ನೃತ್ಯ ಕಲಾವಿದೆ ಮಿಲನ ಭರತ್ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾದ ಕಿಗ್ಗಾಲು ಗಿರೀಶ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯಪಾಲನೆ ಮಹತ್ವದ ಬಗ್ಗೆ ವಿವರಿಸಿದರು. ಡೀನ್ ಬೋಪಣ್ಣ ಹಾಗೂ ಅರ್ಜುನ್ ಸಿಂಗ್ ಅವರು ವಿದ್ಯಾರ್ಥಿಗಳಿಗೆ ಉನ್ನತ ಸಾಧನೆ ಮಾಡುವಂತಾಗಬೇಕು ಎಂದರು. ವಿಎಂಸಿ ಮತ್ತು ಪಿಟಿಸಿ ಕಮಿಟಿಯ ಸದಸ್ಯರುಗಳು ಹಾಜರಿದ್ದರು. ಉಪ ಪ್ರಾಚಾರ್ಯರಾದ ಸುಧಾಮಣಿ ವಂದಿಸಿದರು.








