ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಒಂದು ತಿಂಗಳಿನಿoದ 7 ಜಾನುವಾರುಗಳನ್ನು ಮತ್ತು ಬೆಸಗೂರು ಗ್ರಾಮದಲ್ಲಿ ಒಂದೇ ದಿನ 3 ಹಸುಗಳನ್ನು ಬಲಿ ಪಡೆದ ಹುಲಿ ಇಂದು ಬಂಧಿಯಾಗಿದೆ.

ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಠಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ಡ್ರೋಣ್ ಕ್ಯಾಮೆರಾ ಬಳಸಿ ಆರ್.ಆರ್.ಟಿ ಸಿಬ್ಬಂದಿಗಳ ಮೂಲಕ ಹುಲಿಯ ಚಲನವಲನ ಪತ್ತೆ ಮಾಡಲು ಕೂಂಬಿAಗ್ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಸಾಕಾನೆ ಶಿಬಿರದಿಂದ ಮಹೇಂದ್ರ ಹಾಗೂ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಿಂದ ಭೀಮ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮಸ್ಥರ ತೋಟಗಳು ಹಾಗೂ ಕೀರೆಹೊಳೆಯ ಸುತ್ತಮುತ್ತಲಿನಲ್ಲಿ ದ್ರೋಣ್ ಕ್ಯಾಮರಾ ಬಳಸಿ ಹುಲಿಯ ಚಲನವಲನ ಪತ್ತೆ ಕಾರ್ಯಾಚರಣೆ ನಡೆಸಲಾಯಿತು.

ಕೀರೆಹೊಳೆಯ ದಡದಲ್ಲಿ ಬಿದಿರಿನ ಬುಡದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿ ಸಂಜೆ 6 ಗಂಟೆಯ ಸಮಯದಲ್ಲಿ ಜಾನುವಾರುಗಳ ಕಳೇಬರವಿದ್ದ ಕಡೆಗೆ ಬರುತ್ತಿರುವ ದೃಶ್ಯ ದ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಆದರೆ ಹುಲಿ ಸುಮಾರು 4 ಗಂಟೆಗಳ ಕಾಲ ನಿದ್ದೆಗೆ ಜಾರಿತು. ದ್ರೋಣ್ ಕ್ಯಾಮರಗಳ ಮೂಲಕ ಎಷ್ಟೇ ಪ್ರಯತ್ನ ಪಟ್ಟರು ಮಲಗಿದ್ದ ಹುಲಿಯನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗಲಿಲ್ಲ. ಮತ್ತೆ ದ್ರೋಣ್ ಕ್ಯಾಮರಾದ ಸೂಚನೆಯನ್ನು ಆಧರಿಸಿ, ಭೀಮ ಹಾಗೂ ಮಹೇಂದ್ರ ಸಾಕಾನೆಗಳೊಂದಿಗೆ ಕಾರ್ಯಾಚರಣೆ ತಂಡ ಹುಲಿ ಮಲಗಿದ್ದಲ್ಲಿಗೆ ತೆರಳಿತು. ಅರವಳಿಕೆ ತಜ್ಞ ಡಾ.ರಮೇಶ್ ಅವರು ಹುಲಿಗೆ ಡಾಟ್ ಮಾಡುವ ಮೂಲಕ ಸುಮಾರು 6 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಯಿತು.
ಬಂಧಿಯಾದ ಹುಲಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು.
ವಿರಾಜಪೇಟೆ ಎ.ಸಿ.ಎಫ್ ತಾಸಿಂ ಬಾನು, ತಿತಿಮತಿ ಎ.ಸಿ.ಎಫ್ ಗೋಪಾಲ್, ವಿರಾಜಪೇಟೆ ಆರ್ ಎಫ್ ಓ ಶಿವರಾಂ, ತಿತಿಮತಿ ಹಾಗೂ ಪೊನ್ನಂಪೇಟೆ ಆರ್ ಎಫ್ ಓ ಗಂಗಾಧರ್, ಕುಟ್ಟ, ಶ್ರೀಮಂಗಲ, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಡಿ ಆರ್ ಎಫ್ ಓ, ಗಳು, ಶಾರ್ಫ್ ಶೂಟರ್ ಗಳಾದ ರಂಜನ್, ರಮೇಶ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮ ನಿರ್ದೇಶಿತ ಪ್ರತಿನಿಧಿ ಬೋಸ್ ಮಾದಪ್ಪ, ಡ್ರೋನ್ ನಿರ್ವಾಹಕ ಚಕ್ಕೇರ ತಮ್ಮಯ್ಯ, ತಿತಿಮತಿ ಆನೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, ಪೊನ್ನಂಪೇಟೆ, ತಿತಿಮತಿ, ವಿರಾಜಪೇಟೆ ಆರ್ ಆರ್ ಟಿ ಸಿಬ್ಬಂದಿಗಳು, ಅರಣ್ಯ ಪಾಲಕರು ಮತ್ತಿರರು ಕಾರ್ಯಾಚರಣೆ ನಡೆಸಿ ಹುಲಿಯನ್ನು ಕ್ಷಿಪ್ರಗತಿಯಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

*ಶಾಸಕರ ಶ್ಲಾಘನೆ*
ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಾಚರಣೆ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿ ಸೆರೆ ಹಿಡಿದು ಸ್ಥಳಾಂತರಿಸುತ್ತಿರುವ ವಿಷಯ ತಿಳಿದು ವಿಧಾನಸೌಧದಿಂದ ಮೆಟ್ರೋ ಮೂಲಕ ಕೆಂಗೇರಿಗೆ ತೆರಳಿ ಪರಿಶೀಲಿಸಿದರು.
ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಹುಲಿ ಸೆರೆ ಹಿಡಿದು ಜನರ ಸಮಸ್ಯೆಗೆ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆೆ ವ್ಯಕ್ತಪಡಿಸಿದರು. 







