
ಮಡಿಕೇರಿ NEWS DESK ಫೆ.11 : ಪಿ.ಕೃಷ್ಣೇಗೌಡ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಕ್ಷಣಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಯೋಜಕರಾಗಿ ತನು ಕಿಶೋರ್ ಕೆ.ಕೆ, ಜಿಲ್ಲಾ ಸಮಿತಿಯ ವಕ್ತಾರರಾಗಿ ಜೀವನ್ ಎಂ.ಜಿ, ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿಯಾಗಿ ಶಶಿಕುಮಾರ್ ಹೆಚ್.ಎಂ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಕಲಾ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾಗಿ ಸೋನಿ, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಕಾರ್ಯಪ್ಪ ಎ.ಜಿ, ಉಸ್ತುವಾರಿಯಾಗಿ ರಂಜನ್ ಕೆ.ಐ, ಜಿಲ್ಲಾ ಮಹಿಳಾ ಉಸ್ತುವಾರಿಗಳಾಗಿ ಮಂಜುಳಾ ಹಾಗೂ ಭವ್ಯ ವಿನೋದ್ ಆಯ್ಕೆಯಾದರು. ಜಿಲ್ಲೆಯ ಗಡಿಭಾಗವಾದ ಸಂಪಾಜೆ ಹೋಬಳಿಯಲ್ಲಿ ಸಂಘಟನೆಯನ್ನು ಸದೃಢಗೊಳಿಸುವ ಸಲುವಾಗಿ ಉಸ್ತುವಾರಿಯಾಗಿ ಸುಕುಮಾರ್ ಕೆ.ಕೆ ಅವರನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನಾಯಕ ಪಿ.ಕೃಷ್ಣೇಗೌಡ ಅವರು ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಕನ್ನಡ ನಾಡು, ನುಡಿ, ನೆಲ ಜಲದ ಉಳಿವಿಗಾಗಿ ಮತ್ತು ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗಾಗಿ ಕಳೆದ 25 ವರ್ಷಗಳಿಂದ ರಕ್ಷಣಾ ವೇದಿಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಕೊಡಗು ಜಿಲ್ಲೆಯಲ್ಲೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗಿದೆ, ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಮುಂದೆಯೂ ಹೋರಾಟ ನಡೆಯಲಿದೆ ಎಂದರು.
ಮುAದಿನ ದಿನಗಳಲ್ಲಿ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ, ಹೋಬಳಿ, ವಲಯ ಸಮಿತಿ, ಗ್ರಾಮ ಸಮಿತಿ, ಕಾರ್ಮಿಕ ಸಮಿತಿ, ಮಹಿಳಾ ಸಮಿತಿ ಮತ್ತಿತರ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ರಚನೆಯಾಗಲಿವೆ ಎಂದು ತಿಳಿಸಿದರು.









