ಮಡಿಕೇರಿ ಫೆ.14 : ಪೊನ್ನಂಪೇಟೆ ವ್ಯಾಪ್ತಿಯ ಕೆ.ಬಾಡಗ ಗ್ರಾಮದಲ್ಲಿ ಎರಡು ಅಮಾಯಕ ಜೀವಗಳು ಹುಲಿ ದಾಳಿಗೆ ಬಲಿಯಾಗಲು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರಣ್ಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಭಾನುವಾರ ಚೇತನ್ ಎಂಬಾತನನ್ನು ಹುಲಿ ಕೊಂದು ಹಾಕಿದೆ, ಮರುದಿನ ಬೆಳಗ್ಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಅರಣ್ಯ ಅಧಿಕಾರಿಗಳು ಚೇತನ್ ಮೃತಪಟ್ಟಾಗಲೇ ಎಚ್ಚೆತ್ತುಕೊಂಡಿದ್ದರೆ ವೃದ್ಧನ ಜೀವ ಉಳಿಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ಮಾಡದೆ ಭಾವನಾತ್ಮಕ ಭಾಷಣಗಳನ್ನು ಮಾಡುತ್ತಿದ್ದಾರೆ. ಹುಲಿಗಳನ್ನು ಗುಂಡು ಹೊಡೆದು ಕೊಲ್ಲುವ ಮಾತುಗಳನ್ನಾಡುತ್ತಾರೆ. ಹುಲಿಯನ್ನು ಕೊಂದು ಜನರು ಜೈಲಿಗೆ ಹೋಗಬೇಕೆ, ಈ ತಮಾಷೆಯನ್ನು ಇವರು ನೋಡಬೇಕೆ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ಎನಿಸಿಕೊಂಡವರು ನಾಟಕ ಮಾಡುವುದನ್ನು ಬಿಡಬೇಕು, ಜನರ ಜೀವನದೊಂದಿಗೆ ಚೆಲ್ಲಾಟ ಬೇಡ. ಒಂದು ಹುಲಿಯನ್ನು ಕೊಂದಾಕ್ಷಣ ಸಮಸ್ಯೆ ಬಗೆಹರಿದು ಬಿಡಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ, ಹುಲಿ ಯಾಕೆ ಕಾಡು ಬಿಟ್ಟು ನಾಡಿಗೆ ಬರುತ್ತಿದೆ ಎನ್ನುವ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ. ಕಾಡುಗಳನ್ನು ನಾಶ ಮಾಡಿ ತೋಟಗಳನ್ನೇ ಕಾಡೆಂದು ಅರಣ್ಯ ಅಧಿಕಾರಿಗಳು ಪ್ರತಿಬಿಂಬಿಸುತ್ತಿದ್ದಾರೆ. ಹುಲಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅರಣ್ಯ ಅಧಿಕಾರಿಗಳು ತಮ್ಮ ಕಡತದಲ್ಲಿ ಉಲ್ಲೇಖಿಸಿದ್ದಾರೆ. ಇದು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವ ಯತ್ನವಾಗಿದೆ ಎಂದು ಪೊನ್ನಣ್ಣ ಆರೋಪಿಸಿದರು.
ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ವನ್ಯಜೀವಿಗಳ ದಾಳಿ ಕುರಿತು ಉನ್ನತ ಮಟ್ಟದ ಸಭೆ ನಡೆಸಬೇಕು. ಹುಲಿ ಉಪಟಳ ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು, ಕಠಿಣ ಶಿಕ್ಷಯಾಗುವಂತೆ ನೋಡಿಕೊಳ್ಳಬೇಕು ಮತ್ತು ಹುಲಿ ಉಪಟಳದ ವಿರುದ್ಧ ಅರಣ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಶ್ವದ ವಿವಿಧ ದೇಶಗಳಲ್ಲಿ ದಟ್ಟ ಅರಣ್ಯ ಪ್ರದೇಶವಿದೆ, ಅಲ್ಲಿನ ಜನ ನಿರಾತಂಕವಾಗಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಇಲ್ಲಿ ಮಾತ್ರ ಯಾಕೆ ಹೀಗಾಗುತ್ತಿದೆ, ಅಧಿಕಾರಿಗಳು ಈ ಬಗ್ಗೆ ಯಾಕೆ ಚಿಂತನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ ಪೊನ್ನಣ್ಣ, ಕಾಫಿ ತೋಟಗಳಿಗೆ ಮಾಲೀಕರು ಹಾಗೂ ಕಾರ್ಮಿಕರು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್ ನಾಯರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪ್ರಮುಖರಾದ ಕಿರಣ್ ಪೂವಯ್ಯ, ಬಲ್ಯಾಟಂಡ ಕೌಶಿಕ್ ಹಾಗೂ ಶರೀನ್ ಗಿರೀಶ್ ಉಪಸ್ಥಿತರಿದ್ದರು.









