ಮಡಿಕೇರಿ ಫೆ.22 : ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳು ಬಹುಭಾಗ ತೋಟಗಳಲ್ಲಿಯ ಮರಗಿಡಗಳ ಮಧ್ಯದಲ್ಲಿ ಹಾದು ಹೋಗಿದ್ದು, ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ ಕಂಬಗಳು ಬಾಗಿ, ತಂತಿಗಳು ಕೆಳಮಟ್ಟಕ್ಕಿಳಿದು ಇದರಿಂದಾಗಿ ವಿದ್ಯುದಾಘಾತಗಳಾಗುವ ಸಂಭವವಿರುತ್ತದೆ.
ಆದ್ದರಿಂದ ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು ಕಂಡುಬಂದರೆ ಸದರಿ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಲು ಕೋರಿದೆ.
ತೋಟಗಳಲ್ಲಿ ಒಳ್ಳೆ ಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್ ಪೈಪ್ಗಳನ್ನು ಉಪಯೋಗಿಸುತ್ತಿದ್ದು, ಇವುಗಳು ವಿದ್ಯುತ್ ಮಾರ್ಗಕ್ಕೆ ತಾಗಿ ಆಗಿಂದಾಗ್ಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಿದೆ. ಆದ್ದರಿಂದ, ಅಲ್ಯೂಮಿನಿಯಂ, ಕಬ್ಬಿಣದ ಏಣಿ ಬದಲು ಬಿದಿರು, ಫೈಬರ್ ಏಣಿಗಳನ್ನೇ ಉಪಯೋಗಿಸಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.














