ಮಡಿಕೇರಿ ಮಾ.6 : ಕಲ್ಲುಗುಂಡಿ-ದಬ್ಬಡ್ಕ-ಚೆಟ್ಟಿಮಾನಿ ರಸ್ತೆಯನ್ನು ಡಾಂಬರೀಕರಣ ಮಾಡಿ ಕೇವಲ 10 ದಿನಗಳಾಗಿದ್ದು, ಈಗ ಡಾಂಬರು ಕಿತ್ತು ಬರುತ್ತಿದೆ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯ ಡಾಂಬರನ್ನು ಕೈಯಲ್ಲಿ ಕಿತ್ತು ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯರು ಮಳೆಗಾಲ ಈ ರಸ್ತೆ ಉಳಿಯುವುದಿಲ್ಲವೆಂದು ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್ ಕಳಪೆ ಕಾಮಗಾರಿ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಗೂಬೆ ಕೂರಿಸಿ ಪ್ರಯೋಜನವಿಲ್ಲ. ಶೇ.40 ಕಮಿಷನ್ ಸರ್ಕಾರ ಮತ್ತು ಶಾಸಕರೇ ಈ ಕಳಪೆ ಕಾಮಗಾರಿಗೆ ನೇರ ಹೊಣೆ ಎಂದು ಆರೋಪಿಸಿದರು.
ಸರ್ಕಾರದ ಅನುದಾನದಿಂದ ಆದ ಕಾಮಗಾರಿಗಳಿಗೆ ಸಂಬoಧಿಸಿದoತೆ ಶಾಸಕರು ಹಾಗೂ ಸಂಸದರು ತಮ್ಮ ಪರವಾಗಿ ಬ್ಯಾನರ್ ಗಳನ್ನು ಅಳವಡಿಸಬಾರದೆಂದು ನ್ಯಾಯಾಲಯವೇ ಸೂಚನೆ ನೀಡಿದೆ. ಆದೇಶವನ್ನು ಮೀರಿ ಈ ರಸ್ತೆ ಬದಿಯಲ್ಲಿ ಶಾಸಕರ ಬ್ಯಾನರ್ ಅಳವಡಿಸಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪೂರ್ಣಗೊಂಡಿದೆ ಎಂದು ಬರೆಯಲಾಗಿದೆ. ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಪನೇಡ್ಕ ಅಜಿತ್, ಶಿವರಾಮ ಕೊಪ್ಪದ, ಕೊಪ್ಪದ ಭುವನೇಶ್ವರ, ಗುಂಡ್ಯ ದಿನಕರ, ರಘುನಾಥ್ ಬಾಲಂಬಿ, ಮನು ಏಣಿಯಾರ, ಕೆದಂಬಾಡಿ ಪುರುಷೋತ್ತಮ, ಉಮಾಶಂಕರ ನಿಡಿಂಜಿ, ಕೌಶಿಕ್ ಹೊಸೂರು, ಕಿಶೋರ್ ಬಂಗಾರಕೋಡಿ, ಮಧು ಹೊಸೂರು, ಭಾರತ್ ಮುಕ್ಕಾಟಿ, ಉದಯ ಹೊದ್ದೆಟ್ಟಿ, ಪ್ರಸನ್ನ ಪನೇಡ್ಕ ಮತ್ತಿತರರು ಈ ಸಂದರ್ಭ ಹಾಜರಿದ್ದರು.








