ಮಡಿಕೇರಿ ಮಾ.23 : ರಾಷ್ಟ್ರ ರಕ್ಷಣೆಗಾಗಿ ಶತ್ರುವಿನ ಗುಂಡಿಗೆ ಮೊದಲು ಎದೆಯೊಡ್ಡುವ ಗಡಿಭದ್ರತಾ ಪಡೆ ಸಿಬ್ಬಂದಿಗಳು ನಿವೃತ್ತರಾದ ಬಳಿಕ ಅವರಿಗೆ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ಈ ಬಗ್ಗೆ ಸರ್ಕಾರಗಳು ಸೂಕ್ತ ಸ್ಪಂದನವನ್ನು ನೀಡುತ್ತಿಲ್ಲವೆನ್ನುವ ಅಸಮಾಧಾನ ಅರೆ ಸೇನಾ ಪಡೆಯ ನಿವೃತ್ತ ಯೋಧರ ಸಮಾವೇಶದಲ್ಲಿ ವ್ಯಕ್ತವಾಯಿತು.
ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಸಮಾಜ ಸೇವಕ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಿದರು. ಕೊಡಗು ನಿವೃತ್ತ ಅರೆ- ಮಿಲಿಟರಿ ಸಂಘದ ಅಧ್ಯಕ್ಷ ಪುಲಿಯಂಡ ಚಂಗಪ್ಪ ಅವರು, ನಿವೃತ್ತ ಅರೆ ಮಿಲಿಟರಿ ಯೋಧರ ಜ್ವಲಂತ ಸಮಸ್ಯೆಗಳ ಕುರಿತು ಅತಿಥಿಗಳಿಗೆ ಮಾಹಿತಿ ಒದಗಿಸಿದರು.
ಅರೆಸೇನಾ ಪಡೆಯ ಮಾಜಿ ಯೋಧ ನೂರೇರ ಭೀಮಯ್ಯ ಮಾತನಾಡಿ, ದೇಶದ ಸೇನಾ ಪಡೆ ಮತ್ತು ಅರೆಸೇನಾ ಪಡೆ ಒಂದೇ ಎಂಬ ಭಾವನೆ ಜನತೆಯಲ್ಲಿದೆ. ಈ ಹಿಂದೆ ಸಂಘದ ದಶಮಾನೋತ್ಸವದ ಸಂದರ್ಭ ನಮ್ಮ ಅಹವಾಲುಗಳನ್ನು ಕೊಡಗಿನ ಹಾಲಿ ಶಾಸಕರಿಗೆ ನೀಡಲಾಗಿದ್ದರು ಸೂಕ್ತ ಸ್ಪಂದನ ದೊರಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.
ಜಿಲ್ಲಾಡಳಿತ ಸಂಸದರು, ಶಾಸಕರನ್ನು ಒಳಗೊಂಡoತೆ ಮೂರು ತಿಂಗಳಿಗೊಮ್ಮೆಯಾದರೂ ನಮ್ಮೊಂದಿಗೆ ಕುಂದು ಕೊರತೆ ಸಭೆ ನಡೆಸಬೇಕೆಂದು ಮನವಿ ಮಾಡಿದರು.
ಅರೆ ಸೇನಾಪಡೆಯ ನಿವೃತ್ತರಿಗೆ ಮಿಲಿಟರಿ ಕ್ಯಾಂಟೀನ್ ಸೌಲಭ್ಯವಿಲ್ಲ. ಮಾಜೀ ಅರೆಸೇನಾ ಪಡೆ ಯೋಧರು ಮೃತಪಟ್ಟಾಗ ಅವರಿಗೆ ಸೂಕ್ತ ಗೌರವ ನೀಡುವ ಕಾರ್ಯ ನಡೆದಿಲ್ಲ. ಅರೆ ಸೇನಾ ಪಡೆಗಳ ಕುಟುಂಬದ ತೆರಿಗೆ ಪಾವತಿಗೆ ಗ್ರಾಪಂ, ಪಟ್ಟಣ ಪಂಚಾಯ್ತಿಯಲ್ಲಿ ಶೇ.50 ರಿಯಾಯಿತಿ ಇದ್ದರೂ ಕೆಲವು ಪಿಡಿಒಗಳು ತೆರಿಗೆ ರಿಯಾಯಿತಿ ನೀಡುತ್ತಿಲ್ಲ. ಅರೆಸೇನಾ ಪಡೆದ ಸೈನಿಕರು ಯುದ್ಧ ಇತ್ಯಾದಿ ಸಂದರ್ಭದಲ್ಲಿ ಸಾವನ್ನಪ್ಪಿದ್ದಲ್ಲಿ ಅವರ ಅವಲಂಬಿತರಿಗೆ ತುರ್ತು ಪಿಂಚಣಿ ವ್ಯವಸ್ಥೆ ಜಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಎಂಎಲ್ಸಿ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಭಾರತದ ಗಡಿಭದ್ರತಾ ಪಡೆ ವಿಶ್ವದಲ್ಲೆ ಅತೀ ದೊಡ್ಡ ಯೋಧರ ಪಡೆಯಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿ, ರಾಷ್ಟç ರಕ್ಷಣೆಗಾಗಿ ಕೊಡಗು ಯೋಧರನ್ನು ನಿಡುವ ಕಾರ್ಖಾನೆಯಂತೆ ಕೆಲಸ ಮಾಡುತ್ತಿದೆಯೆಂದು ನುಡಿದರು.
ನ್ಯಾಯ ದೊರಕಿಸಿಕೊಡುವೆ- ಸಮಾವೇಶ ಉದ್ಘಾಟಿಸಿದ ಎ.ಎಸ್. ಪೊನ್ನಣ್ಣ ಮಾತನಾಡಿ, ಅರೆ ಸೇನಾ ಪಡೆಯ ಯೋಧರ ಸಮಸ್ಯೆಗಳಿಗೆ
ನ್ಯಾಯಾಲಯದ ಮೂಲಕ ಹೋರಾಟ ನಡೆಸಿಯಾದರೂ ನ್ಯಾಯ ಒದಗಿಸುವದಾಗಿ ಪೊನ್ನಣ್ಣ ಭರವಸೆ ನೀಡಿದರು.
ಯೋಧರೆಂದರೆ ಗೌರವವಿದೆ. ಆದರೆ, ಕೇವಲ ಗೌರವದಿಂದ ಜೀವನ ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದ ಅವರು, ಗ್ರಾ.ಪಂ.ಮಟ್ಟದಲ್ಲಿ ತೆರಿಗೆ ರಿಯಾಯಿತಿ ಬಗ್ಗೆ ಬಗ್ಗೆ ಮಾತುಕತೆ ಮಾಡಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಅರೆ ಮಿಲಿಟರಿ ಪಡೆಯ ವಿವಿಧ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿ, ಈಗಾಗಲೇ ಅಧಿಕಾರಿಗಳ ಮಟ್ಟದ ಮಾತುಕತೆ ಮಾಡಿದ್ದೇನೆ. ಅರೆ ಮಿಲಿಟರಿ ಪಡೆಯ ನಿವೃತ್ತ ಯೋಧರು ನಿವೇಶನಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಬೇಕಾಗಿದೆ. ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನು ಸೇವೆ ನೀಡಲಿದ್ದೇನೆಂದು ಸ್ಪಷ್ಟಪಡಿಸಿದರು.
ಬಿಎಸ್ಎಫ್ ನಿವೃತ್ತ ಇನ್ಸ್ ಪೆಕ್ಟರ್ ಪುಲಿಯಂಡ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಲ್ಲಿನ ಅರೆ ಸೇನಾ ಪಡೆಯ ನಿವೃತ್ತ ಯೋಧರು, ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.










