ಮಡಿಕೇರಿ ಮಾ.28 : ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಬಡವರಿಗೆ ಹೊರೆಯಾಗಿರುವ ದುಬಾರಿ ದಂಡ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಾನ್, ಆಧಾರ್ ಲಿಂಕ್ ಕುರಿತು ವ್ಯಾಪಕ ಪ್ರಚಾರ ನೀಡದ ಸರ್ಕಾರ ಇದೀಗ ಬಡವರು, ಕೂಲಿ ಕಾರ್ಮಿಕರು, ಆಟೋಚಾಲಕರು, ಅನಕ್ಷರಸ್ಥರು, ಜನಸಾಮಾನ್ಯರಿಗೆ ಹೊರೆಯಾಗಬಲ್ಲ ರೂ.1 ಸಾವಿರ ದಂಡ ವಿಧಿಸುತ್ತಿರುವುದು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಪಾನ್, ಆಧಾರ್ ಲಿಂಕ್ ನೆಪದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಬಡವರು ದಂಡ ಪಾವತಿಗಾಗಿಯೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಒಂದು ಬಡ ಕುಟುಂಬದಲ್ಲಿ 5 ರಿಂದ 10 ಮಂದಿ ಇರುತ್ತಾರೆ. ಒಬ್ಬರು ಅಥವಾ ಇಬ್ಬರು ಮಾತ್ರ ದುಡಿಯುತ್ತಿರುತ್ತಾರೆ. ಇವರೆಲ್ಲರೂ ತಲಾ ಒಂದು ಸಾವಿರ ದಂಡ ಪಾವತಿಸಬೇಕೆಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದೀಗ ಸರ್ಕಾರ ಪಾನ್, ಆಧಾರ್ ಲಿಂಕ್ ನ ದಿನಾಂಕವನ್ನು ಜೂ.30 ರವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ದಂಡ ವಸೂಲಿ ಮಾಡಬಾರದು. ಜು.1 ರ ನಂತರ ದಂಡ ವಿಧಿಸುವುದಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಪಾನ್, ಆಧಾರ್ ಲಿಂಕ್ ಕುರಿತು ಮನೆ ಮನೆ ಪ್ರಚಾರ ಕಾರ್ಯವನ್ನು ಅಧಿಕಾರಿಗಳ ಮೂಲಕ ಸರ್ಕಾರ ಮಾಡಬೇಕು. ದಿನಾ ದುಡಿದು ತಿನ್ನುವವರಿಗೆ, ಅನಕ್ಷರಸ್ಥರಿಗೆ ಹಾಗೂ ಕುಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲದಾಗಿದೆ. ದಂಡ ವಸೂಲಿ ಮಾಡುವ ಮೊದಲು ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮದ ಅರಿವು ಎಲ್ಲರಿಗೆ ಆಗಿದೆಯೇ ಎನ್ನುವುದನ್ನು ಮೊದಲು ಮನವರಿಕೆ ಮಾಡಿಕೊಳ್ಳಲಿ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಪ್ರಚಾರಕ್ಕೆ ಮಾತ್ರ ಸೀಮಿತವಾದರೆ ಸಾಲದು. ಪಾನ್, ಆಧಾರ್ ಲಿಂಕ್ ಪ್ರಕ್ರಿಯೆ ಸುಲಭವಾಗುವಂತೆ ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫ್ಯಾನ್ಸಿ ಬೆಳ್ಯಪ್ಪ ಆಗ್ರಹಿಸಿದ್ದಾರೆ.










