ಸುಂಟಿಕೊಪ್ಪ ಏ.2 : ದೇಶಾದ್ಯಂತ ಕ್ರೈಸ್ತ ಬಾಂಧವರು ಪಾಸ್ಕಕಾಲದ ಆಚರಣೆಯ ಅಂಗವಾಗಿ ಗರಿಗಳ ಭಾನುವಾರವನ್ನು ಆಚರಿಸಿದರು. ತೆಂಗಿನ ಗರಿಗಳೊಂದಿಗೆ ಪಾಸ್ಕಹಬ್ಬದ ಪವಿತ್ರ ವಾರದ ಆಚರಣೆಗೆ ಮುನ್ನುಡಿಯನ್ನು ಇಟ್ಟರು. ಸುಂಟಿಕೊಪ್ಪದ ಸಂತ ಅಂತೋಣಿಯವರ ದೇವಾಲಯದಲ್ಲಿ ಪೂಜೆ ಹಾಗೂ ಪ್ರಾರ್ಥನೆಯನ್ನು ಶೃದ್ಧಾಭಕ್ತಿಯಿಂದ ಸಲ್ಲಿಸಿದರು.
ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್ ಹಾಗೂ ಉಪಯಾಜಕರಾದ ಚಾಲ್ಸ್ ಅವರು ಸಂತ ಮೇರಿ ಶಾಲಾ ಮೈದಾನದಲ್ಲಿ ಇಂದು ಬೆಳಿಗ್ಗೆ ತೆಂಗಿನ ಗರಿಗಳನ್ನು ಆಶೀರ್ವಚಿಸಿ ನಂತರ ಕ್ರೈಸ್ತ ಬಾಂಧವರಿಗೆ ವಿತರಿಸಿದರು.
ನಂತರ ಶಾಲಾ ಆವರಣದಿಂದ ದೇವಾಲಯದವರೆಗೆ ಗರಿಗಳನ್ನು ಹಿಡಿದು ವಿಶೇಷ ಪ್ರಾರ್ಥನೆಯೊಂದಿಗೆ ಮೆರವಣಿಗೆ ನಡೆಸಿದರು. ದೇವಾಲಯದಲ್ಲಿ ಬಲಿಪೂಜೆಯನ್ನು ಆರ್ಪಿಸುವ ಮೂಲಕ ಮುಂದಿನ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಸಂತ ಕ್ಲಾರ ಕನ್ಯಾಸ್ತ್ರೀ, ಕಾನ್ವೆಂಟಿನ ಕನ್ಯಾಸ್ತ್ರೀಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳು ಬಲಿಪೂಜೆ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಪಾಸ್ಕಕಾಲದ ಆಚರಣೆಯ ಅಂಗವಾಗಿ ಕ್ರೈಸ್ತ ಬಾಂಧವರು ಮಾಂಸಹಾರವನ್ನು ತ್ಯಜಿಸಿ 40 ದಿನಗಳ ಉಪವಾಸ ಆಚರಿಸುತ್ತಾರೆ.













