ಮಡಿಕೇರಿ ಏ.11 : ಅಯ್ಯಪ್ಪ ಸ್ವಾಮಿ ಮಾಲಾಧಾರಿ ತಂದೆ ಹಾಗೂ ಮಗ ನದಿ ಪಾಲಾದ ಘಟನೆ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯಲ್ಲಿ ನಡೆದಿದೆ.
ಸೋಮವಾರಪೇಟೆ ಮೂಲದ ಮಣಿಕಂಠ (47) ಹಾಗೂ ಅವರ ಮಗ ಪ್ರೀತಂ (15) ಮೃತ ದುರ್ದೈವಿಗಳು. ಗುಡ್ಡೆಹೊಸೂರು ಚಿಕ್ಕ ಬೆಟ್ಟಗೇರಿಯಲ್ಲಿರುವ ಸಂಬoಧಿಕರಾದ ಅಂಬಾಡಿ ರವಿ ಎಂಬುವವರ ಮನೆಗೆ ಬಂದಿದ್ದ ಇಬ್ಬರು ಮಂಗಳವಾರ ಮಧ್ಯಾಹ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ಸ್ನಾನಕ್ಕೆಂದು ನಾಲ್ವರು ನದಿಗೆ ಇಳಿದಿದ್ದರು ಎಂದು ತಿಳಿದು ಬಂದಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










