ಮಡಿಕೇರಿ ಏ.13 : ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಕೆದಕಲ್ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವ ಆರಂಭಗೊಂಡಿದ್ದು, ಏ.16 ರಂದು ದೊಡ್ಡಹಬ್ಬ ನಡೆಯಲಿದೆ.
ಅಂದು ಬೆಳಿಗ್ಗೆ 8.30 ಗಂಟೆಗೆ ನಾಡು ಹತ್ತುವುದರಿಂದ ಪ್ರಾರಂಭಗೊಂಡು ಕೊಂಬಾಟ್, ಚೌರಿಯಾಟ್, ಬಿಲ್ಲಾಆಟ್ ನಂತರ ದೇವರಿಗೆ ಭಂಡಾರ, ಹರಕೆ ಹಾಕುವುದು, ಭಕ್ತಾಧಿಗಳಿಗೆ ದೇವರ ಪ್ರಸಾದ ವಿನಿಯೋಗ, ಬಾಳೆಸೂರೆ ಎಸೆಯುವುದು, ಕಾಳೆ ಓಡಿಸುವುದು, ತೆಂಗಿನಕಾಯಿ ಗುಂಡು ಹೊಡೆಯುವುದು ಹಾಗೂ ದೇವಿಯ ಇತರೆ ಕೈಂಕರ್ಯ ನಡೆಯಲಿದೆ.
ಏ.17 ರಂದು ಚಿಕ್ಕಹಬ್ಬ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮೂರು ತರಹದ ಕುಣಿತ, ಭಂಡಾರ ಹಾಕುವುದು ಮತ್ತು ಕೊಂಬು ಅರ್ಪಿಸುವುದು. ಏ.18 ರಂದು ಭಂಡಾರ ಹಾಕುವುದು, ತಪ್ಪು ಹಣ ಒಪ್ಪಿಸುವುದು, ಶುದ್ಧ ಕಲಶ ಹಾಗೂ ಮಹಾ ಪೂಜೆಯೊಂದಿಗೆ ಉತ್ಸವ ಮುಕ್ತಾಯವಾಗಲಿದೆ ಎಂದು ಅಧ್ಯಕ್ಷ ಮುಕ್ಕಾಟಿರ ಅಶ್ವಿನ್ ಹಾಗೂ ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.







