ಸೋಮವಾರಪೇಟೆ ಮೇ 8 : ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು ಸಂಪಿಗೆಕಟ್ಟೆಯಲ್ಲಿ ರೋಡ್ ಶೋ ನಡೆಸಿದರು. ಭಾಷಣಕಾರರಾಗಿ ವೇದಿಕೆಯೇರಿದ ರಂಜನ್ ಅವರ ಪುತ್ರ ಡಾ.ಕಾರ್ಯಪ್ಪ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು, ಅಮೆರಿಕಾದ ಜನರ ಸೇವೆ ಮಾಡುತ್ತಿದ್ದಾರೆಂದು ಆರೋಪಿಸಿರುವ ಅಪ್ಪಚ್ಚು ರಂಜನ್ ಅವರ ಡಾಕ್ಟರ್ ಪುತ್ರ ನಾನೇ ಎಂದರು. ಅಪ್ಪಚ್ಚು ರಂಜನ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದ ಡಾ.ಕಾರ್ಯಪ್ಪ, ನಾನು ವೈದ್ಯಕೀಯ ವಿದ್ಯಾಭ್ಯಾಸವನ್ನು ಜಿಲ್ಲೆಯ ಹೊರಗೆ ಮಾಡಿದ್ದೇನೆ. ನನ್ನ ತಂದೆ ಈಗ ಮಡಿಕೇರಿ ಕ್ಷೇತ್ರವನ್ನೇ ವಿದ್ಯಾ ಕೇಂದ್ರವನ್ನಾಗಿ ಮಾಡಿದ್ದಾರೆ. ವಿಶ್ವವಿದ್ಯಾನಿಲಯ, ವೈದ್ಯಕೀಯ, ಇಂಜಿನಿಯರಿಂಗ್, ವಸತಿ ಶಾಲೆಗಳು, ಸೈನಿಕ ಶಾಲೆ ಎಲ್ಲವೂ ಇಲ್ಲೇ ಇದೆ ಎಂದರು.
ನಾನು ಪ್ರತಿ ಚುನಾವಣಾ ಸಮಯದಲ್ಲಿ ಅಮೇರಿಕದಿಂದ ಬರುತ್ತೇನೆ, ಕ್ಷೇತ್ರದಲ್ಲಿ ಸೇವಾಕಾರ್ಯದಲ್ಲಿ, ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೋವಿಡ್ ಸಮಯದಲ್ಲಿ ನನ್ನ ತಂದೆ ಪಿಪಿಇ ಕಿಟ್ ಧರಿಸಿ, ಕೋವಿಡ್ ಪೀಡಿತರನ್ನು ಭೇಟಿ ಮಾಡುವಂತೆ ಸಲಹೆ ನೀಡಿದವನೂ ನಾನೇ. “ಆದರೆ, ಡಾಕ್ಟರ್ ಮಂಥರ್ ಗೌಡ್ರೇ, ಪಕ್ಕದ ಅರಕಲಗೂಡಿನಲ್ಲಿದ್ದುಕೊಂಡೇ ಮಡಿಕೇರಿ ಕ್ಷೇತ್ರಕ್ಕೆ ನೀವೇನು ಮಾಡಿದ್ದೀರಿ” ಎಂದು ಡಾ.ಕಾರ್ಯಪ್ಪ ಪ್ರಶ್ನಿಸಿದರು.









