ಸುಂಟಿಕೊಪ್ಪ ಮೇ 22: ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ 7 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಎಲ್ಲಾರೂ ಸೂಕ್ತ ಚಿಕಿತ್ಸೆಯ ಹಿನ್ನಲೆಯಲ್ಲಿ ಅಪಾಯದಿಂದ ಪಾರಾಗಿದ್ದು, ಜನತೆ ಯಾವುದೇ ಅಂತಕ ಪಡುವ ಅವಶ್ಯಕತೆ ಇಲ್ಲವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತರೊಂದಿಗೆ ಚರ್ಚಿಸಿದರು.
ನಂತರ ಮಾತನಾಡಿದ ಅವರು ಕಳೆದ 15 ದಿನಗಳಿಂದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಜ್ವರ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಂಡಿದೆ. ನಿವಾಸಿಗಳಲ್ಲಿ ಅತಿಯಾಗಿ ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮನೆಯ ಸುತ್ತ ಮುತ್ತ ಸ್ವಚ್ಚ ಪರಿಸರವನ್ನು ಕಾಪಾಡಿಕೊಳ್ಳುವಂತೆ ನಿಂತ ನೀರು ಸೊಳ್ಳೆ ಕಾಟ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಪ್ರಾಥಮಿಕ ಆರೋಗ್ಯದ ವತಿಯಿಂದ ಆಯೋಜಿಸಲಾದ ಜಾಗೃತಿ ಜಾಥವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಚಾಲನೆ ನೀಡಿದರು.
ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು, ಎಸ್.ಎಂ.ಎಸ್.ಅರಬ್ಬಿ ಕಾಲೇಜಿನ ವಿದ್ಯಾರ್ಥಿಗಳು ಡೆಂಗ್ಯೂ ವಿರುದ್ಧ ಎಚ್ಚರಿಕೆಯ ಜಾಗೃತಿ ಜಾಥದಲ್ಲಿ ಘೋಷಣೆಗಳನ್ನು ಕೂಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಕರಪತ್ರ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭ ಸುಂಟಿಕೊಪ್ಪ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರಗತಿ, ಬಿಎಚ್ಇಓ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ)ಹೆಚ್.ಕೆ.ಶಾಂತಿ, ಹೇಲ್ತ್ ಇನ್ಸ್ಪೇಕ್ಟರ್ಗಳಾದ ಶೀನಿವಾಸ್, ಅರುಳಪ್ಪ, ಮುತ್ತುರಾಜ್, ಜನಾರ್ಧನ, ವಿಶ್ವಜ್ಞ, ಆರೋಗ್ಯ ಕಾರ್ಯಕರ್ತೆಯರುಗಳಾದ ಪ್ರೇಮ, ಯೋಗಿಣಿ, ಕವಿತ, ಆಶಾ ಸುಗಮಕಾರರು ಜ್ಯೋತಿ ಭಾಸ್ಕರ್ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಇದ್ದರು.








