ಮಡಿಕೇರಿ ಜೂ.29 : ಕಳೆದ ವಿಧಾನಸಭಾ ಚುಣಾವಣೆಯಲ್ಲಿನ ಬಿಜೆಪಿ ಸೋಲಿನ ವಿಮರ್ಶೆ ಮಾಡುತ್ತಲೆ ಇದ್ದಲ್ಲಿ ನಾವು ಅಲ್ಲೆ ಉಳಿದು ಬಿಡುತ್ತೇವೆ. ಸೋಲನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಶ್ರಮಿಸೋಣ ಎಂದು ಬಿಜೆಪಿ ಪ್ರಮುಖ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಕರೆ ನೀಡಿದ್ದಾರೆ.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ‘ಬಿಜೆಪಿ ಕಾರ್ಯಕರ್ತರ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯಕರ್ತರು ಬಿಜೆಪಿ ಸೋಲಿನ ವಿಮರ್ಶೆಯಲ್ಲಿ ತೊಡಗಿದ್ದಾರೆ. ಮೊದಲು ಇದಕ್ಕೆ ಪೂರ್ಣವಿರಾಮ ಹಾಕಿ, ಮುಂದೆ ಏನು ಎನ್ನುವುದರತ್ತ ಚಿಂತನೆ ಹರಿಸೋಣವೆಂದು ತಿಳಿಸಿದರು.
ಬಿಜೆಪಿ ಸರ್ಕಾರ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕೇವಲ ‘ಮೋದಿ’ ಹೆಸರನ್ನು ಹೇಳುತ್ತಾ ಹೋದರೆ ಮತ ಬರಲಾರದು. ಮೋದಿ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ, ಮಾಡಿರುವ ಮಹತ್ತರ ಕಾರ್ಯಗಳ ಮೇಲೆ ಮತಗಳು ಬರುತ್ತದೆ ಎಂದರು.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಈ ಗೆಲುವಿನೊಂದಿಗೆ ಕಾಂಗ್ರೆಸ್ ಒಂದು ಗೆರೆ ಎಳೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ, ಕಾಂಗ್ರೆಸ್ ಎಳೆದ ಗೆರೆಗಿಂತಲು ದೊಡ್ಡ ಗೆರೆಯನ್ನು ಎಳೆಯಬೇಕೆಂದು ಹೇಳಿದರು.
::: ಕಾಂಗ್ರೆಸ್ಗೆ ಅಭಿನಂದನೆ :::
ಮಾಜಿ ಸಚಿವ ಆರ್.ಅಶೋಕ್ ಅವರು ಮಾತಿನ ನಡುವೆ, ಅಕ್ಕಿ ಭಾಗ್ಯದ ಮೂಲಕ ಪಡಿತರ ಚೀಟಿಗೆ ದೊರಕುತ್ತಿದ್ದ 5 ಕೆ.ಜಿ. ಅಕ್ಕಿ ಕೇಂದ್ರದ ಮೋದಿ ಸರ್ಕಾರದ್ದೆಂದು ಜನರಿಗೆ ಮುಟ್ಟಿದೆ. ಈ ಹಿನ್ನೆಲೆ ಅಕ್ಕಿ ಭಾಗ್ಯದ ಮೂಲಕ ಕೇಂದ್ರದ ಕೊಡುಗೆಯನ್ನು ಜನರ ಅರಿವಿಗೆ ತಂದ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಇಂದು ಅಕ್ಕಿ ಕೇಂದ್ರದ್ದು, ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದೆಂದು ತಿಳಿಯುವಂತಾಯಿತೆಂದು ಗೇಲಿ ಮಾಡಿದರು.
::: ಬೀದಿಗಿಳಿದು ಹೋರಾಟ :::
ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸಮರ್ಪಕವಾಗಿ ಜಾರಿಯಾಗದೆ ಗೊಂದಲವಾಗಿದ್ದು, ಸಿದ್ದರಾಮಯ್ಯ ಅವರ ಈ ಮೋಸವನ್ನು ಜನರಿಗೆ ತಲುಪಿಸಬೇಕು ಮತ್ತು ಈ ಬಗ್ಗೆ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಕಾಂಗ್ರೆಸ್ ಏನೆಂಬುದನ್ನು ಜನರಿಗೆ ಮನದಟ್ಟು ಮಾಡಬೇಕೆಂದು ಅಶೋಕ್ ಹೇಳಿದರು.
::: ವರ್ಗಾವಣೆ ದಂಧೆ :::
ಬಿಜೆಪಿಯನ್ನು ಶೇ.40 ಕಮಿಷನ್ ಎಂದು ಟೀಕಿಸುತ್ತಿದದ ಕಾಂಗ್ರೆಸ್ ಅದಕ್ಕೆ ದಾಖಲೆಯನ್ನು ಇಲ್ಲಿಯವರೆಗೆ ನೀಡಿಲ್ಲ. ಬದಲಾಗಿ ಇದೀಗ ದುಡ್ಡು ಹೊಡೆಯುವುದಕ್ಕೆ ಅಧಿಕಾರಿಗಳ ವರ್ಗಾವಣೆಯ ದಂಧೆಯಲ್ಲಿ ತೊಡಗಿದ್ದು, ಕಾಂಗ್ರೆಸ್ನ ನಿಜಬಣ್ಣ ಬಯಲಾಗುತ್ತಿದೆ ಎಂದು ಆರೋಪಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು, ಆದರೆ, ಸತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಚಿಂತನೆಯಡಿ ಮೋದಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯ ಭದ್ರಕೋಟೆಯಾಗಿ ಕೊಡಗು ಇದೆ ಎನ್ನುವುದನ್ನು ಮುಂದಿನ ಚುನಾವಣೆಗಳಲ್ಲಿ ನಿರೂಪಿಸೋಣ ಎಂದರು.
ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಬಿಜೆಪಿಗೆ ಸೋಲು ಹೊಸದೇನಲ್ಲ. ಸೋಲಿನಿಂದ ಧೃತಿಗೆಡಬೇಕಾಗಿಲ್ಲ. ಹೀಗಿದ್ದೂ, ವೈಯಕ್ತಿಕವಾದ ದ್ವೇಷವನ್ನು ಪಕ್ಷದ ವಿರುದ್ಧವಾಗಿ ತರುವುದು ಬೇಡ. ಮುಂಬರುವ ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾಲ್ಲೂಕು ಪಂಚಾಯ್ತಿ, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಡೆಯಿಂದ ಗೆಲುವಿನೆಡೆಗೆ ಬಿಜೆಪಿ ನಡೆಯಬೇಕೆಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಿಂತಲೂ ಬಿಜೆಪಿ ಹೆಚ್ಚಿನ ಮತ ಗಳಿಸಿತ್ತು. ಆದರೆ, ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ನಿಂದಾಗಿ ಮತ್ತು ಕೂಲಿ ಕಾರ್ಮಿಕ ಸಮೂಹ ಜಿಲ್ಲೆಯಲ್ಲಿ ಹೆಚ್ಚಾಗಿರುವುದರಿಂದ ಸೋಲು ಎದುರಾಯಿತು ಎಂದು ಅಭಿಪ್ರಾಯಪಟ್ಟರು.
ಮಾಜಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ನಾಪಂಡ ರವಿ ಕಾಳಪ್ಪ, ಅರುಣ್ ಭೀಮಯ್ಯ, ಮಹೇಶ್ ಜೈನಿ, ಅರುಣ್ ಭೀಮಯ್ಯ ಮೊದಲಾದವರಿದ್ದರು.







