ಮಡಿಕೇರಿ ಸೆ.6 : ಕಳೆದ ಕೆಲವು ದಿನಗಳಿಂದ ಸುಂಟಿಕೊಪ್ಪ ಸಮೀಪ ಕೆದಕಲ್ ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಮತ್ತು ಅರಣ್ಯ ಸಿಬ್ಬಂದಿಯೊಬ್ಬರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಸೋಮವಾರ ಇಬ್ಬರು ಬೈಕ್ ಸವಾರರ ಮೇಲೆ ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಅರಣ್ಯ ಸಿಬ್ಬಂದಿ ಗಿರೀಶ್ ಎಂಬುವವರು ಮೃತಪಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸೂಕ್ತ ಕ್ರಮಕ್ಕೆ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ದುಬಾರೆಯ ಸಾಕಾನೆಗಳಾದ ಅಜಯ್, ವಿಕ್ರಂ, ಸುಗ್ರೀವ, ಲಕ್ಷ್ಮಣ, ಪ್ರಶಾಂತ್ ಮತ್ತು ಹರ್ಷ ಸಾಕಾನೆಗಳನ್ನು ಬಳಸಿ ಮಂಗಳವಾರದಿಂದಲೇ ಕಾರ್ಯಾಚರಣೆ ನಡೆಸಿದ ಇಲಾಖೆ ಇಂದು ಕೆದಕಲ್ ಸಮೀಪದ ಹೊರೂರು ಎಂಬಲ್ಲಿ ಎಸ್ಟೇಟ್ ಒಂದರ ಒಳಗಿದ್ದ 18 ವರ್ಷದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು.
ಅರೆವಳಿಕೆ ನೀಡಿ ಸೆರೆ ಹಿಡಿಯಲ್ಪಟ್ಟ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.
ಡಿಎಫ್ಒ ಪೂವಯ್ಯ, ಎಸಿಎಫ್ ಗೋಪಾಲ್, ಸೋಮವಾರಪೇಟೆ ವಲಯದ ಅರಣ್ಯಾಧಿಕಾರಿ ಚೇತನ್, ಮಡಿಕೇರಿ ವಲಯದ ದೇವಯ್ಯ, ಕುಶಾಲನಗರದ ರಂಜನ್, ಸುಬ್ರಾಯ, ವಿಲಾಸ್ ಸೇರಿದಂತೆ ಆರ್ಆರ್ಟಿ ಮತ್ತು ಇಟಿಎಫ್ ನ 40 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







