ಮೂರ್ನಾಡು ಸೆ.9 : ಮಡಿಕೇರಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಕಾರಿಗಳ ಕಚೇರಿ ಮತ್ತು ಸಮಗ್ರ ಶಿಕ್ಷಣ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾದ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಬಿ.ಎಸ್. ಕುಶನ್ ರೈ ಉದ್ಘಾಟಿಸಿ, ಮಾತನಾಡಿದ ಅವರು ಸ್ಪರ್ಧೆಗಳಿದ್ದರೆ ಮಾತ್ರ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯವಾಗುತ್ತದೆ. ಯಾವುದೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಭಾಗವಹಿಸುವುದರ ಅನುಭವವನ್ನು ವಿದ್ಯಾರ್ಥಿಗಳು ಇಷ್ಟಪಡುವಂತಾಗಬೇಕು ಎಂದು ಹೇಳಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಪಿ.ಗುರುರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮೂರ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಅಶೋಕ್ ಮತ್ತು ಮೂರ್ನಾಡು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಉಷಾ ಉಪಸ್ಥಿತರಿದ್ದರು.
ಮೂರ್ನಾಡು ಕ್ಲಸ್ಟರ್ಗೆ ಸಂಬಂಧಿಸಿದ 18 ಶಾಲೆಗಳ ವಿದ್ಯಾರ್ಥಿಗಳು ಛದ್ಮವೇಷ, ಭರತನಾಟ್ಯ, ಜಾನಪದ ನೃತ್ಯ, ಧಾರ್ಮಿಕ ಪಠಣ, ಜಾನಪದ ಗೀತೆ, ಕಂಠಪಾಠ ಇಂತಹ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರು ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಶಾಲಾ ವಿದ್ಯಾರ್ಥಿನಿ ಮೌಲ್ಯ ಪ್ರಾರ್ಥಿಸಿ, ಕೆ.ಪಿ.ಗುರುರಾಜ್ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಲೀನಾ ಸುಮಿತ ಲೋಚ್ ಕಾರ್ಯಕ್ರಮ ನಿರೂಪಿಸಿ, ಉಷಾ ವಂದಿಸಿದರು.









