ನಾಪೋಕ್ಲು ಸೆ.17 : ಸಮುದಾಯದ ಜನರ ಜೊತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉತ್ತಮ ಬಾಂಧವ್ಯದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎಂದು ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ನುಡಿದರು.
ಸಮೀಪದ ಹಳೆ ತಾಲೂಕು ಭಗವತಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾ.ಪಂ ಸಹಯೋಗದಲ್ಲಿ ಆಯೋಗಿಸಿದ ಪೋಷಣ್ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳು ಯಾವುದೇ ಸೌಲಭ್ಯದಿಂದ ವಂಚಿತರಾಗದಂತೆ ಸಲಹೆ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ ಅರುಣ್ ಮಾತನಾಡಿ, ನಾವು ನಮ್ಮ ಸುತ್ತಮುತ್ತಲಿನಲ್ಲಿ ತರಕಾರಿ ಗಳನ್ನು ಬೆಳೆಸಿ ಅದನ್ನು ಆಹಾರದ ಜೊತೆ ಬಳಸಿದಾಗ ಅದರ ರುಚಿ ಹಾಗೂ ಪೌಷ್ಠಿಕತೆ ವಿಶೇಷ ವಾಗಿರುತ್ತದೆ ಎಂದರು.
ಆರೋಗ್ಯ ಕಾರ್ಯಕರ್ತೆ ಉಮಾ ಮಹೇಶ್ವರಿ ಪೌಷ್ಟಿಕತೆ ಜೊತೆಗೆ ಚುಚ್ಚು ಮದ್ದು ಸಹ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೀಲಾ ಅಶೋಕ್ ಮಾತೃ ವಂದನಾ ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ದಿನದ ವಿಶೇಷ ಹಾಗೂ ಪ್ರತಿಜ್ಞಾ ವಿಧಿಯನ್ನು ಮಾಡಲಾಯಿತು.
ಈ ಸಂದರ್ಭ ಪ್ರಥಮ್ ಸಂಸ್ಥೆ ಅನುಷಾ, ಸುರಬಿ ಯವರಿಂದ ಶಾಲಾ ಪೂರ್ವ ಶಿಕ್ಷಣ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಹಾಗೂ ನಾಪೋಕ್ಲು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆ ಯರು ಹಾಜರಿದ್ದರು.
ಶೈಲ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಭಾಗ್ಯವತಿ ನಿರೂಪಿಸಿ ಆಶಾಲತಾ ಸ್ವಾಗತಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ








