ನಾಪೋಕ್ಲು ಸೆ.21 : ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆಯು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಅವರ ಅಧ್ಯಕ್ಷತೆಯಲ್ಲಿ ಸುಳ್ಯದ ಕೊಡಿಯಾಲ ಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಮಾತನಾಡಿ, ಮಾ.31, 2023ರ ಅಂತ್ಯಕ್ಕೆ 16,960 ಜನ ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ.4.26 ಕೋಟಿ ಪಾಲು ಬಂಡವಾಳ, ರೂ. 156,53 ಕೋಟಿ ಠೇವಣಿ ಸಂಗ್ರಹಿಸಿದೆ. ಸದಸ್ಯರುಗಳಿಗೆ ರೂ.145.43 ಕೋಟಿ ವಿವಿಧ ಸಾಲಗಳನ್ನು ಈ ಸಹಕಾರಿ ವರ್ಷದಲ್ಲಿ ವಿತರಿಸಲಾಗಿದೆ.
ರೂ. 13.69 ಕೋಟಿ ವಿವಿಧ ಬ್ಯಾಂಕ್ಗಳಲ್ಲಿ ಧನ ವಿನಿಯೋಗ ಮಾಡಿದ್ದು, ಸಂಘವು ಆರಂಭದಿಂದಲೂ ಲಾಭದಲ್ಲಿ ನಡೆಯುತ್ತಿದ್ದು, ವರದಿ ವರ್ಷದಲ್ಲಿ ರೂ. 879.65 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.1,51,88,550.61 ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ 16 ಶಾಖೆಗಳಲ್ಲಿ ಇ- ಸ್ಟಾಂಪಿಂಗ್, ಸುಳ್ಯ ಶಾಖೆಯಲ್ಲಿ ಕಡಿಮೆ ಬಾಡಿಗೆಗೆ ಸೇಫ್ ಲಾಕರ್, ಗ್ರಾಹಕರ ಅನುಕೂಲಕ್ಕಾಗಿ ಆರ್.ಟಿ.ಜಿ.ಎಸ್, ನೇಫ್ಟ್ ಸೌಲಭ್ಯವನ್ನು ಕೂಡ ನೀಡುತ್ತಿದ್ದೇವೆ ಎಂದರು.
ಸಂಘವು ಈ ಸಹಕಾರ ವರ್ಷದಲ್ಲಿ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ 22 ಶಾಖೆಗಳನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲಿ 25 ಶಾಖೆಗಳನ್ನು ಹೊಂದುವ ಗುರಿ ಹೊಂದಿದೆ. ಮುಂದಿನ ವರ್ಷದಲ್ಲಿ ರೂ. 250 ಕೋಟಿ ಠೇವಣಿ ಸಂಗ್ರಹಿಸಿ, ರೂ. 200 ಕೋಟಿ ಸಾಲ ವಿತರಿಸಿ, ರೂ.1,000 ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆಯನ್ನು ಆಡಳಿತ ಮಂಡಳಿಯು ಹೊಂದಿದೆ. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ವಿವರಿಸಿದರು.
ಸನ್ಮಾನ: ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿರುವ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ನಿತ್ಯಾನಂದ ಮುಂಡೋಡಿ ದಂಪತಿಗೆ ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರಾದ ಸದಾನಂದ ಜಾಕ, ಎ.ವಿ.ತೀರ್ಥರಾಮ, ಚಂದ್ರ ಕೋಲ್ದಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಜಯಲಲಿತ ಕೆ.ಎಸ್, ನಳಿನಿ ಸೂರಯ್ಯ, ಲತಾ ಎಸ್.ಮಾವಜಿ, ಹೇಮಚಂದ್ರ ಐ.ಕೆ, ಜೆ.ವಿ.ನವೀನ್ ಕುಮಾರ್, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಸಲಹಾ ಸಮಿತಿಯ ನವೀನ್ ಅಂಬೆಕಲ್ಲು, ದೇವಿಪ್ರಸಾದ್ ಪೋತಂಡ ವೆಂಕಟ್ರಮಣ ಪಡ್ಡು ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ತುಳಸಿ ಕಣ್ಣಿರ, ಹಿರಿಯರಾದ ಅಂಬೆಕಲ್ಲು ಕುಶಾಲಪ್ಪ ಗೌಡ ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ ವಂದಿಸಿದರು.
ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರಿಗೂ ಕೂಪನ್ ನೀಡಿ ಗಿಫ್ಟ್ ನೀಡಲಾಯಿ.
ವರದಿ : ದುಗ್ಗಳ ಸದಾನಂದ








