ಮಡಿಕೇರಿ ಸೆ.22 : ಕೊಡವ ಎಂಟ್ರೆಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಹಕಾರಿಯು 2023 ಮಾರ್ಚ್ ಅಂತ್ಯಕ್ಕೆ ರೂ.9.7 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.4 ರಷ್ಟು ಡಿವಿಡೆಂಟ್ ನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.
2022-23 ನೇ ಸಾಲಿನಲ್ಲಿ 47 ಮಂದಿಗೆ 1,27,45000 ರೂ. ಜಾಮೀನು ಸಾಲ ನೀಡಿದ್ದು, ವಾಯಿದೆ ಮೀರಿದ ಸಾಲ ವಸೂಲಾತಿಗೆ ಬಾಕಿ ಇರುವುದಿಲ್ಲ. ಸದಸ್ಯರ ಸಹಕಾರದಿಂದ ಶೇ.100 ರಷ್ಟು ವಸೂಲಾತಿಯಾಗಿದೆ. ಸದಸ್ಯರ ಪಾಲು ಹಣ 2022ರ ಮಾರ್ಚ್ ಅಂತ್ಯಕ್ಕೆ 1 ಕೋಟಿ 70 ಸಾವಿರ ಇದ್ದು, 2023ರ ಮಾರ್ಚ್ ಅಂತ್ಯಕ್ಕೆ 1 ಕೋಟಿ 30 ಲಕ್ಷಗಳಷ್ಟು ಆಗಿರುತ್ತದೆ. 2024ರ ಅಂತ್ಯಕ್ಕೆ ರೂ.2 ಕೋಟಿ ಗುರಿ ನಿಗಧಿ ಪಡಿಸಲಾಗಿದೆ.
ಸಂಘ 2019 ಮಾ.29 ರಲ್ಲಿ ಸೌಹಾರ್ದ ಕಾಯ್ದೆಯಡಿ ನೋಂದಣಿಗೊಂಡು 101 ಸಹಕಾರಿಗಳಿಂದ ರೂ.18.90 ಲಕ್ಷ ಪಾಲು ಬಂಡವಾಳದೊಂದಿಗೆ ವ್ಯವಹಾರ ಪ್ರಾರಂಭಿಸಿತು. 2023 ಮಾ.31ರ ಅಂತ್ಯಕ್ಕೆ 353 ಸಹಕಾರಿಗಳಿಂದ 1,31,80000 ರೂ. ಪಾಲು ಬಂಡವಾಳವನ್ನು ಕ್ರೋಢೀಕರಿಸಲಾಗಿದೆ. ಸೌಹಾರ್ದದಲ್ಲಿ ಜಾಮೀನು ಸಾಲ ಮತ್ತು ಆಸ್ತಿ ಅಡಮಾನ ಸಾಲ ಸೌಲಭ್ಯವಿದ್ದು, ರೂ.3 ಲಕ್ಷದವರೆಗೆ ಜಾಮೀನು ಸಾಲ ಹಾಗೂ ರೂ.25 ಲಕ್ಷದವರೆಗೆ ಆಸ್ತಿ ಅಡಮಾನ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
::: ಇಂದು ಮಹಾಸಭೆ :::
2022-23ನೇ ಸಾಲಿನ ಕೊಡವ ಎಂಟ್ರೆಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಹಕಾರಿಯ 5ನೇ ವಾರ್ಷಿಕ ಮಹಾಸಭೆಯು ಸೆ.23 ರಂದು ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 11 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸೌಹಾರ್ದದ ಎಲ್ಲಾ ಸಹಕಾರಿಗಳು ಸಭೆಗೆ ತಪ್ಪದೆ ಹಾಜರಾಗುವಂತೆ ದಿನೇಶ್ ಕಾರ್ಯಪ್ಪ ಮನವಿ ಮಾಡಿದ್ದಾರೆ.







