ನಾಪೋಕ್ಲು ಅ.17 : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 27ನೇ ವರ್ಷದ ಕಾವೇರಿ ರಥಯಾತ್ರೆ ಅ.17ರಿಂದ 18ರ ವರೆಗೆ ನಡೆಯಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಹೇಳಿದರು.
ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಪ್ರತಿಮೆಯ ಭವ್ಯವಾದ ಪುಷ್ಪಾಲಂಕೃತ ಮೆರವಣಿಗೆಯು ನಾಪೋಕ್ಲುವಿನ ರಾಮಮಂದಿರದಿಂದ ಹೊರಡಲಿದ್ದು, ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚೇರಂಬಾಣೆ –ಚೆಟ್ಟಿಮಾನಿ ಮಾರ್ಗವಾಗಿ ಭಾಗಮಂಡಲ-ತಲಕಾವೆರಿಗೆ ತೆರಳಲಿದೆ. ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಅಂತ್ಯಗೊಳ್ಳಲಿದೆ ಎಂದರು.
ಅ.18 ರಂದು ಬೆಳಿಗ್ಗೆ 6 ಗಂಟೆಗೆ ಭಾಗಮಂಡಲದಿಂದ ರಥಯಾತ್ರೆ ಆರಂಭಗೊಳ್ಳಲಿದ್ದು, ಚೇರಂಗಾಲ, 7 ಗಂಟೆಗೆ ಅಯ್ಯಂಗೇರಿ, ಪುಲಿಕೋಟು, 9 ಗಂಟೆಗೆ ಪೇರೂರು ಬಲ್ಲಮಾವಟಿ,11 ಗಂಟೆಗೆ ಚೋನಕೆರೆ ಮೂಲಕ ಮಧ್ಯಾಹ್ನ 12.30 ಗಂಟೆಗೆ ನಾಪೋಕ್ಲು ತಲುಪಲಿದೆ ಎಂದು ಮಾಹಿತಿ ನೀಡಿರು.
27 ವರ್ಷಗಳಿಂದ ನಡೆಸುತ್ತಾ ಬಂದಿರುವ ಈ ಪುಣ್ಯ ರಥಯಾತ್ರೆಗೆ ಭಕ್ತಾದಿಗಳ ತುಂಬು ಹೃದಯದ ಸಹಕಾರ ನೀಡುತ್ತಿದ್ದು, ಇನ್ನು ಮುಂದೆಯೂ ಇದೇ ರೀತಿ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿದೇವಯ್ಯ, ಮಚ್ಚಂಡ ಶಂಭು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ









