ಮಡಿಕೇರಿ ಅ.26 : ಕುಶಾಲನಗರ ಸಮೀಪದ ಹಾರಂಗಿ ಮೀನುಗಾರಿಕಾ ಕ್ಷೇತ್ರದಲ್ಲಿ ಬೃಹತ್ ಮತ್ಸ್ಯಾಲಯ ಕೇಂದ್ರ ಪ್ರಾರಂಭಿಸುವ ಚಿಂತನೆ ಹೊಂದಲಾಗಿದೆ ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.
ಅವರು ಹಾರಂಗಿಯಲ್ಲಿ ಮೀನುಗಾರಿಕಾ ಇಲಾಖೆಯ ಅಪರೂಪದ ತಳಿಯಾದ ಮಹಾಶಿರ್ ಮೀನು ಮರಿಗಳ ಉತ್ಪಾದನಾ ಮತ್ತು ಪಾಲನಾ ಕೇಂದ್ರಕ್ಕೆ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶ ವಿದೇಶಗಳಲ್ಲಿ ಮೀನಿಗೆ ಬೇಡಿಕೆ ಇದ್ದು ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನದಿ ಕೆರೆಗಳಲ್ಲಿ ಮೀನು ಮರಿ ತಳಿಗಳನ್ನು ಬೆಳೆಸಲು ಸರ್ಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಆಸಕ್ತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸರ್ಕಾರದ ಮೂಲಕ ಪ್ರೋತ್ಸಾಹ ಧನ ಕೂಡ ಕಲ್ಪಿಸಲಾಗುತ್ತಿದೆ. ರಾಜ್ಯ, ನೆರೆ ರಾಜ್ಯಗಳು ಹಾಗೂ ವಿದೇಶಗಳಿಗೆ ಕೂಡ ಮೀನು ಸರಬರಾಜು ಮಾಡುವ ವ್ಯವಸ್ಥೆಗೆ ಸಹಾಯಹಸ್ತ ಕಲ್ಪಿಸಲಾಗುತ್ತಿದೆ ಎಂದರು.
ನಾಡಿನಲ್ಲಿ ಸಿಹಿ ನೀರಿನ ಮೀನು ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರೂಗಳ ತನಕ ಸಾಲ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲಾ ತಾಲೂಕು ಮಟ್ಟದಲ್ಲಿ ಮೀನು ಮಾರಾಟ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ಮುನ್ನೂರು ವಾಹನಗಳನ್ನು ಮೀನು ಮಾರಾಟಕ್ಕೆ ಸರ್ಕಾರದ ಮೂಲಕ ಖರೀದಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಇಲಾಖೆ ಮೂಲಕ ಯೋಜನೆಗಳು ರೂಪುಗೊಂಡಿವೆ ಎಂದರು.
ಎಲ್ಲೆಡೆ ಮೀನಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತಿದ್ದು ಸಿಹಿ ನೀರಿನಲ್ಲಿ ಮೀನಿನ ಉತ್ಪಾದನೆ ಹೇರಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಅವರ ಕೋರಿಕೆ ಮೇರೆಗೆ ಹಾರಂಗಿ ವ್ಯಾಪ್ತಿಯಲ್ಲಿ ಮೀನುಗಾರಿಕಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
::: ಡಿಕೆಶಿ ನಿರ್ಧಾರ ಸರಿ ಇದೆ :::
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಉಪಮುಖ್ಯಮಂತ್ರಿಗಳ ಚಿಂತನೆ ಸ್ವಾಗತಾರ್ಹವಾಗಿದೆ. ಡಿ.ಕೆ.ಶಿವಕುಮಾರ್ ಅವರು ಎಲ್ಲಾ ರೀತಿಯಲ್ಲಿ ಯೋಗ್ಯವಾದ ಚಿಂತನೆ ಮಾಡುತ್ತಾರೆ, ಆ ಮೂಲಕ ರಾಮನಗರದ ಹೆಚ್ಚಿನ ಅಭಿವೃದ್ಧಿ ಸಾಗಲಿದೆ ಎಂದರು.
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಆರ್.ಗಣೇಶ್, ಉಪ ನಿರ್ದೇಶಕ ಸಿ.ಎಸ್.ಸಚಿನ್, ಸಹಾಯಕ ನಿರ್ದೇಶಕ ಎಸ್.ಎಂ.ಸಚಿನ್, ಕೆ.ಬಿ.ಮಿಲನ, ಸ್ನೇಹ, ಸದಸ್ಯರಾದ ವಿ.ಪಿ.ಶಶಿಧರ್, ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರು ಇದ್ದರು.










