ಮಡಿಕೇರಿ ಅ.31 : ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾಗಿರುವ ಕೊಡಗಿನ ಲೆಫ್ಟಿನೆಂಟ್ ಜನರಲ್ ಕೋದಂಡ.ಪಿ.ಕಾರ್ಯಪ್ಪ ಪಿವಿಎಸ್ಎಂ, ಎವಿಎಸ್ಎಂ, ವಿಎಸ್ಎಂ, ಎಸ್ಎಂ ಅವರು ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಕೋದಂಡ ಕುಟುಂಬಕ್ಕೆ ಸೇರಿದ ಲೆ.ಜ.ಕೋದಂಡ ಪಿ.ಕಾರ್ಯಪ್ಪ ಅವರು, ಭಾರತೀಯ ಸೇನೆಯ ತಮ್ಮ ಕರ್ತವ್ಯದಿಂದ ನಿವೃತ್ತರಾದ ಬಳಿಕ ಮುಂಬಯಿಯಲ್ಲಿ ನೆಲೆಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಕೆ.ಪಿ.ಕಾರ್ಯಪ್ಪ ಅವರು ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯ ಗೌರವಾನ್ವಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಲ್ಲದೆ, ಸೇನೆಯಲ್ಲಿ ನೂತನವಾಗಿ ಸೃಷ್ಟಿಸಲಾದ ‘ಮಾಸ್ಟರ್ ಜನರಲ್ ಸಸ್ಟೈನೆನ್ಸ್’ ಹುದ್ದೆಯನ್ನು ನಿರ್ವಹಿಸಿದ ಮೊದಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿರುವುದು ವಿಶೇಷ.
‘ರಜಪೂತ್ ರೈಫಲ್ಸ್’ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದ ಲೆ.ಜ.ಕೆ.ಪಿ.ಕಾರ್ಯಪ್ಪ, ಭಾರತೀಯ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿಗಳ ಪರ್ಸನಲ್ ಆಫೀಸರ್ ಆಗಿ, ‘ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಟು ಚೀಫ್ ಆಫ್ ಆರ್ಮಿ ಸ್ಟಾಫ್’ ಹುದ್ದೆಗಳನ್ನು ಅಲಂಕರಿಸಿದ್ದರು.
ಸೇನಾ ಹಿನ್ನೆಲೆಯನ್ನು ಹೊಂದಿದ ಜಿಲ್ಲೆಯ ನಾಲ್ಕನೆಯವರಾಗಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಲೆ.ಜ. ಕೆ.ಪಿ.ಕಾರ್ಯಪ್ಪ ಪಾತ್ರರಾಗಿದ್ದಾರೆ. ಈ ಹಿಂದೆ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ, ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಮಹಾವೀರ ಪ್ರಸಾದ್, ಸೇನಾಧಿಕಾರಿ ಹಾಗೂ ಬಾಕ್ಸಿಂಗ್ ತರಬೇತುದಾರ ಚೇನಂಡ ಕುಟ್ಟಪ್ಪ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದುದನ್ನು ಇಲ್ಲಿ ಉಲ್ಲೇಖಿಸಬಹುದು.









