ಮಡಿಕೇರಿ ನ.1 : ಭಾರತ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ ಮತ್ತು ಉಕ್ಕಿನ ಮಹಿಳೆ ಎಂದು ಹೆಸರಾಗಿದ್ದ ದಿ.ಮಾಜೀ ಪ್ರಧಾನಿ ಇಂದಿರಾಗಾಂಧಿ ಅವರ 39ನೇ ಪುಣ್ಯತಿಥಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದೇ ಸಂದರ್ಭ ದೇಶದ ಗೃಹ ಸಚಿವರಾಗಿದ್ದ ಮತ್ತು 550 ಸಣ್ಣ ಸಣ್ಣ ರಾಜ್ಯಗಳನ್ನು ಒಗ್ಗೂಡಿಸಿ ಉಕ್ಕಿನ ಮನುಷ್ಯ ಎಂದು ಹೆಸರುವಾಸಿಯಾಗಿದ್ದ ಸರದಾರ್ ವಲ್ಲಭಾಯಿ ಪಟೇಲ್ ಅವರ 148ನೇ ಜನ್ಮದಿನಾಚರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ 186ನೇ ಪುಣ್ಯತಿಥಿಯನ್ನು ಆಚರಿಸಲಾಯಿತು.
ದೇಶದ ಅಪ್ರತಿಮ ಮಹಿಳೆ ಎಸಿಕೊಂಡ ಹಾಗೂ ಸುಮಾರು 16 ವರ್ಷಗಳ ಕಾಲ ದೇಶವನ್ನು ಆಳಿದ ಇಂದಿರಾಗಾಂಧಿ ಅವರ ವ್ಯಕ್ತಿತ್ವ, ಸಾಧನೆ, ಹಿರಿಮೆ ಮತ್ತು ಬಡ ಹಾಗೂ ಶೋಷಿತ ವರ್ಗಕ್ಕೆ ಅವರು ಕೈಗೊಂಡ ಕಾರ್ಯಕ್ರಮ, ಬ್ಯಾಂಕ್ಗಳ ರಾಷ್ಟ್ರೀಕರಣ, ರಾಜಧನ ಪದ್ಧತಿ, 20 ಅಂಶಗಳ ಕಾರ್ಯಕ್ರಮ ಅನುಷ್ಠಾನಗಳ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಡಿಸಿಸಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ದಿನದ ಮಹತ್ವದ ಕುರಿತು ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಹೆಚ್.ಎ.ಹಂಸ, ಕೆ.ಎ.ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕಾಂಗ್ರೆಸ್ ಜಿಲ್ಲಾ ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಾಜ್ ಹೊಸೂರು, ಪ್ರಮುಖರಾದ ಚುಮ್ಮಿದೇವಯ್ಯ, ಕೆ.ಎಂ.ವೆಂಕಟೇಶ್, ಪುಲಿಯಂಡ ಜಗದೀಶ್, ಕಲೀಲ್ ಭಾಷ, ಕೆ.ಜಿ.ಪೀಟರ್, ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಜುಲೇಕಾಬಿ, ಟಿ.ಎಂ.ಉದಯ್ಕುಮಾರ್, ತೆನ್ನಿರಾ ಮೈನಾ, ಜಯರಾಜ್, ಕೆ.ಎ.ಆನಂದ್, ಪುಷ್ಪ ಪೂಣಚ್ಚ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಡಿಸಿಸಿ ಸದಸ್ಯರಾದ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ನಿರೂಪಿಸಿದರು. ಡಿಸಿಸಿ ಸದಸ್ಯ ಜಾನ್ಸನ್ ಪಿಂಟೋ ವಂದಿಸಿದರು.










