ಮಡಿಕೇರಿ ನ.19 : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಸ್ ಗಳ ಕೊರತೆಯಿಂದ ಕೊಡಗು ಜಿಲ್ಲೆಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಯೋಜನೆಯ ಲಾಭ ಎಲ್ಲಾ ಮಹಿಳೆಯರಿಗೆ ದೊರೆಯುತ್ತಿಲ್ಲವೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಐದು ತಿಂಗಳಿನಿಂದ ಶಕ್ತಿ ಯೋಜನೆ ಜಾರಿಯಲ್ಲಿದ್ದರೂ ಬಸ್ ಗಳ ಕೊರತೆ ಮತ್ತು ಗ್ರಾಮೀಣ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಗಳ ಸೇವೆ ಇಲ್ಲದೆ ಇರುವುದರಿಂದ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಶೇ.70 ರಷ್ಟು ಮಹಿಳೆಯರಿಗೆ ಇದರ ಪ್ರಯೋಜನ ದೊರೆಯುತ್ತಿಲ್ಲವೆಂದು ಗಮನ ಸೆಳೆದಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳೇ ಹೆಚ್ಚು ಇದ್ದರೂ ಕೆಎಸ್ಆರ್ಟಿಸಿ ಬಸ್ ಗಳ ಸೇವೆ ಗ್ರಾಮಗಳಿಗೆ ಲಭ್ಯವಿಲ್ಲ. ಗ್ರಾಮಸ್ಥರು ಮುಖ್ಯ ರಸ್ತೆಗೆ ಬರಬೇಕೆಂದರೆ 10-12 ಕಿ.ಮೀ ದೂರ ನಡೆಯಲೇಬೇಕಾಗಿದೆ. ಕೆಎಸ್ಆರ್ಟಿಸಿ ಸೇವೆಯ ನ್ಯೂನತೆ ಮತ್ತು ಬಸ್ ಗಳ ಕೊರತೆಯಿಂದ ಶಕ್ತಿ ಯೋಜನೆ ಕೊಡಗು ಜಿಲ್ಲೆಗೆ ನಿಷ್ಪ್ರಯೋಜಕವಾಗಿದೆ.
ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ ಮತ್ತು ಗೋಣಿಕೊಪ್ಪ ಮಾರ್ಗದ ಪ್ರಯಾಣಿಕರು ಮಾತ್ರ ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಸ್ ಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮಿತಿ ಮೀರಿದ ಪ್ರಯಾಣಿಕರನ್ನು ಕರೆದೊಯ್ಯಬೇಕಾದ ಅನಿವಾರ್ಯತೆ ಚಾಲಕರು ಹಾಗೂ ನಿರ್ವಾಹಕರಿಗೆ ಎದುರಾಗಿದೆ. ನಿತ್ಯ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಿಗೆ ತೆರಳುವ ಉದ್ಯೋಗಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಗಳ ಕೊರತೆಯಿಂದ ಹೆಚ್ಚು ತೊಂದರೆಯಾಗಿದೆ. ಜನಜಂಗುಳಿಯ ನಡುವೆ ಉಸಿರುಗಟ್ಟಿಸುವ ವಾತಾವರಣದಲ್ಲಿ ಪ್ರಯಾಣಿಸಬೇಕಾದ ದುಸ್ಥಿತಿ ಬಂದೊದಗಿದ್ದು, ಪ್ರಯಾಣಿಕರ ನಡುವೆ ಕಲಹವೂ ಏರ್ಪಡುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಯೋಜನೆಗೆ ತಕ್ಕಂತೆ ಬಸ್ ಗಳನ್ನು ನಿಯೋಜಿಸದೆ ಇರುವುದರಿಂದ ಈ ಸಮಸ್ಯೆಗಳು ಉದ್ಭವಿಸಿದ್ದು, ಕೊಡಗಿನ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚುವರಿ ಬಸ್ ಗಳು ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.
ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಸ್ ಗಳ ಕೊರತೆ ನೀಗಿಸಿ ಶಕ್ತಿ ಯೊಜನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೊಡಗಿನ ಎಲ್ಲಾ ಮಹಿಳೆಯರಿಗೆ ಯೋಜನೆಯ ಲಾಭ ಸಿಗಲು ಗ್ರಾಮೀಣ ಭಾಗದಲ್ಲೂ ಕೆಎಸ್ಆರ್ಟಿಸಿ ಬಸ್ ಗಳ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.









