ಕುಶಾಲನಗರ ನ. 25 : ಕುಶಾಲನಗರದ ಗೌಡ ಸಮಾಜ ಮತ್ತು ಗೌಡ ಯುವಕ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ನ.27 ರಂದು ಪುತ್ತರಿ ಆಚರಣೆ ಸಂಭ್ರಮದಿಂದ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಸಂಜೆ ಕುಶಾಲನಗರ ಗೌಡ ಸಮಾಜದಲ್ಲಿ ಸೇರಿ 7.45ಕ್ಕೆ ದೇವರಿಗೆ ಪೂಜೆ ಸಲ್ಲಿಸಿ ನೆರೆಕಟ್ಟಿ ಮೆರವಣಿಗೆಯಲ್ಲಿ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವುದರೊಂದಿಗೆ ಗುಮ್ಮನಕೊಲ್ಲಿಯಲ್ಲಿ ಗೌಡ ಯುವಕ ಸಂಘದ ಗದ್ದೆಯಲ್ಲಿ ರಾತ್ರಿ 8.45 ಕ್ಕೆ ಗದ್ದೆಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಕದಿರು ತೆಗೆದು ಜನಾಂಗದವರಿಗೆ, ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ನಾಲ್ಕು ಗದ್ದೆಗಳಲ್ಲಿ ಕದಿರು ಬೆಳೆಯಲಾಗಿದ್ದು ಸಾರ್ವಜನಿಕರು ನೂಕುನುಗ್ಗಲಿಲ್ಲದೆ ಕದಿರು ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಸೂದನ ಲಲಿತಾ ಗಣೇಶ್, ಸಮಾಜದ ಸಹ ಕಾರ್ಯದರ್ಶಿ, ದಬ್ಬಡ್ಕ ಡಾಟಿ ಶಾಂತಕುಮಾರಿ ಉಪಸ್ಥಿತರಿದ್ದರು.










