ಮಡಿಕೇರಿ ಡಿ.10 : ಪೊನ್ನಂಪೇಟೆ ತಾಲ್ಲೂಕಿನ ದೇವರಪುರದಲ್ಲಿ ನಡೆದ ಕೇರಳದ ವ್ಯಕ್ತಿಗಳ ವಾಹನ ಅಡ್ಡಗಟ್ಟಿ ಸುಮಾರು 50 ಲಕ್ಷ ರೂ. ನಗದು ಹಾಗೂ ವಾಹನವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ, ದರೋಡೆ ಮಾಡಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ, ಇದರ ಜೊತೆಯಲ್ಲೇ ಹಣ ಕಳೆದುಕೊಂಡಿರುವುದಾಗಿ ದೂರು ನೀಡಿರುವ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರುವರಾಂಗದಿ ತಾಲ್ಲೂಕಿನ ಕೊಡಕಾಡ್ ನಿವಾಸಿ ಗುತ್ತಿಗೆದಾರ ಶಮ್ಜದ್ ಕೆ. ಅವರನ್ನು ಕೂಡ ವಿಚಾರಣೆಗೊಳಪಡಿಸಲಾಗಿದೆ. ಮಾರಾಟ ಮಾಡಲು ಚಿನ್ನಾಭರಣ ಎಲ್ಲಿಂದ ಬಂತು, ಯಾರಿಗೆ ಮಾರಾಟ ಮಾಡಲಾಗಿದೆ, 50 ಲಕ್ಷ ರೂ.ಗಳಷ್ಟು ದೊಡ್ಡ ಮೊತ್ತವನ್ನು ರಾತ್ರಿ ವೇಳೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳ ನಡುವೆ ವಿಚಾರಣೆ ನಡೆಯುತ್ತಿದೆ ಎಂದರು.
ಚಿನ್ನಾಭರಣ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದೂರುದಾರರ ಬಳಿ ಯಾವುದೇ ದಾಖಲೆಗಳಿಲ್ಲ, ತೆರಿಗೆ ಪಾವತಿಸಿದ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ. ದರೋಡೆಕೋರರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ತನಿಖೆ ಕೈಗೊಳ್ಳಲಾಗಿದೆ, ಮತ್ತೊಂದೆಡೆ ದೂರು ನೀಡಿದವರ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದರು.
::: ಪುತ್ರಿಯನ್ನು ಕೊಂದು ಆತ್ಮಹತ್ಯೆ :::
ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್ವೊಂದರಲ್ಲಿ ಮೂವರ ಮೃತದೇಹ ಪತ್ತೆಯಾದ ರ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಸ್ಪಿ, ಕೇರಳ ರಾಜ್ಯದ ಕೊಲ್ಲಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (43), ಅವರ ಪತ್ನಿ ಜಿಬಿ ಅಬ್ರಹಾಂ (38) ಹಾಗೂ 12 ವರ್ಷದ ಪುತ್ರಿ ಮೃತಪಟ್ಟಿದ್ದಾರೆ.
ದಂಪತಿ ಪುತ್ರಿಯನ್ನು ಕೊಲೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಡೆತ್ ನೋಟ್ ಬರೆದಿಟ್ಟಿದ್ದು, ನಮ್ಮ ಸಾವಿಗೆ ನಾವೇ ಕಾರಣವೆಂದು ನಮೂದಿಸಲಾಗಿದೆ, ಅಲ್ಲದೆ ಕೊಲ್ಲಂ ವ್ಯಾಪ್ತಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣವೊಂದು ದಾಖಲಾಗಿರುವ ಕುರಿತು ಉಲ್ಲೇಖಿಸಲಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿದು ಬಂದಿದೆ. ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ತನಿಖೆ ಮುಂದುವರೆದಿದೆ ಎಂದರು.










