
ಮಡಿಕೇರಿ ಜು.27 NEWS DESK : ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ “ಪುಷ್ಪ ನಮನ-ಗಾನ ನಮನ- ಗೌರವ ನಮನ” ಸಲ್ಲಿಸುವ ಹೃದಯಸ್ಪರ್ಶಿಯಾದ “ಕಾರ್ಗಿಲ್ ವಿಜಯ್ ದಿವಸ್” ಕಾರ್ಯಕ್ರಮವು ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಜಿಲ್ಲೆಯಾದ್ಯಂತ 143 ಸಂಘ ಸಂಸ್ಥೆಗಳ ಒಗ್ಗೂಡುವಿಕಯೊಂದಿಗೆ ಭಾವನಾತ್ಮಕವಾಗಿ ಜರುಗಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ದೇಶಪ್ರೇಮಿಗಳು ಈ ವಿನೂತನ ಕಾರ್ಯಕ್ರಮದ ಮೂಲಕ ರಾಷ್ಟ್ರಪ್ರೇಮ ಅಭಿವ್ಯಕ್ತಿಗೊಳಿಸಿದರು. ಕೊಡಗು ಪತ್ರಕರ್ತರ ಸಂಘ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ತೃತೀಯ ವರ್ಷದ 27ನೇ ಕಾರ್ಗಿಲ್ ವಿಜಯ್ ದಿವಸ್ ಹುತಾತ್ಮ ಯೋಧರ ಸ್ಮರಣಾ ಕಾರ್ಯಕ್ರಮಕ್ಕೆ ನಗರದ ಆರ್ಮಿ ಕ್ಯಾಂಟೀನ್ ನ ಹಿರಿಯ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮೊಳ್ಳೇರ ಎಸ್. ಕಾವೇರಿಯಪ್ಪ (ನಿವೃತ್ತ) ಅವರು, ಹುತಾತ್ಮರ ಪ್ರತೀಕವಾಗಿ ನಿಲ್ಲಿಸಲಾಗಿದ್ದ ಸ್ಮಾರಕಕ್ಕೆ ಪುಷ್ಪನಮನದ ಮೂಲಕ ಚಾಲನೆ ನೀಡಿದರು. ಗಡಿ ಕಾಯುವ ಯೋಧರ, ರಾಷ್ಟ್ರದ ಏಕತೆ ಐಕ್ಯತೆಗಾಗಿ ಬಲಿದಾನ ಗೈದ ಯೋಧರ ಪರವಾದ ಘೋಷಣೆಗಳ ನಡುವೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಆಗ್ರಾದ ಪ್ಯಾರಾ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಯೋಧ ಯತೀಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪಿ.ಆರ್.ರಾಜೇಶ್, ಕಾರ್ಯದರ್ಶಿ ಚೇತನ್ ಜಿ.ಡಿ., ರೋಟರಿ ಸಹಾಯಕ ಗವರ್ನರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್, ಡಿವೈಎಸ್ಪಿ ಸೂರಜ್ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಲೆ.ಕ.ಮೊಳ್ಳೇರ ಎಸ್.ಕಾವೇರಪ್ಪ ಅವರು ಮಾತನಾಡಿ, ಈ ನೆಲದ ಪ್ರತಿಯೊಬ್ಬರೂ ದೇಶಪ್ರೇಮ, ವಿನಮ್ರತೆ, ನಿಷ್ಠೆ ಮತ್ತು ಶಿಸ್ತಿನೊಂದಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಮೂಲಕ ದೇಶ ಸೇವೆಗೆ ಮುನ್ನುಗ್ಗುವಂತೆ ಕರೆ ನೀಡಿದರು. ಕಾರ್ಗಿಲ್ ಯುದ್ಧದ ಸಂದರ್ಭ ತಾವು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಸ್ಮರಿಸಿಕೊಂಡ ಅವರು, ಕಾರ್ಗಿಲ್ ಯುದ್ಧವು ನಮ್ಮ ಗುಪ್ತಚರ ಮಾಹಿತಿಯ ವೈಫಲ್ಯದಿಂದ ನಡೆಯಿತೆನ್ನುವ ಆರೋಪವಿದೆ. ಆದರೆ, ಇದು ನಡೆದದ್ದು ಗುಪ್ತಚರ ವೈಫಲ್ಯದಿಂದಲ್ಲ ಎಂದರು. ಉನ್ನತ ಗಿರಿಶಿಖರ ಕಾರ್ಗಿಲ್ನಲ್ಲಿ ಚಳಿಗಾಲದ ಅವಧಿಯಲ್ಲಿನ ಅತ್ಯಂತ ಕಠಿಣ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ನಡುವೆ ಚಳಿಗಾಲದ ಅವಧಿಯಲ್ಲಿ ತಮ್ಮ ತಮ್ಮ ರಕ್ಷಣಾ ತಂಡಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಗಳನ್ನು ಅಂದು ಪಾಕ್ ಮೀರಿ ವಂಚಿಸಿತ್ತೆಂದು ಕಾವೇರಿಯಪ್ಪ ಸ್ಪಷ್ಟಪಡಿಸಿದರು. ಭಾರತೀಯ ಸೈನ್ಯದಲ್ಲಿನ ಸೇವೆ ಎನ್ನುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಸೈನ್ಯದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಬೆಳಗ್ಗೆ ಎದ್ದು ಸೇವೆ ಸಲ್ಲಿಸಲು ತೆರಳಿದ ಬಳಿಕ ಮರಳಿ ಬರುತ್ತೇವೋ ಇಲ್ಲವೋ ಎನ್ನುವ ಅರಿವು ಇರುವುದಿಲ್ಲವೆಂದು ಹೇಳಿದರು., ಪ್ರತಿಯೊಬ್ಬರೂ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಲೆ.ಕ.ಮೊಳ್ಳೇರ ಕಾವೇರಿಯಪ್ಪ ಕರೆ ನೀಡಿದರು.
ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ ಗೌಡ ಅವರು ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮರ ಸ್ಮರಣೆಯಲ್ಲಿ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ. ಯುದ್ಧದ ಸಂದರ್ಭಗಳಲ್ಲಿ ನಾವೇ ಆತಂಕಕ್ಕೆ ಒಳಗಾಗುತ್ತೇವೆ. ಆದರೆ, ಯೋಧರು ಸ್ವತಃ ಯುದ್ಧ ಭೂಮಿಯಲ್ಲಿ ಕೆಚ್ಚೆದೆಯಿಂದ ಪರಿಸ್ಥಿತಿಗಳನ್ನು ಎದುರಿಸಿ ನಡೆಸುವ ಹೋರಾಟ, ಬಲಿದಾನಗಳ ಮೂಲಕ ರಾಷ್ಟ್ರ ರಕ್ಷಣೆ ಮಾಡುವುದು ಮಹತ್ತರವಾದುದು. ಇಂತಹ ಯೋಧರನ್ನು ಸ್ಮರಿಸುವುದು, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು.
ಸೈನಿಕರಿಗೆ ಪ್ರಥಮ ಆದ್ಯತೆ ನೀಡಿ ಗಡಿಗಳನ್ನು ಕಾಯ್ದು ನಿವೃತ್ತರಾಗಿ ಬಂದು ನೆಲೆಸಿರುವ ಯೋಧರ ಸಂಕಷ್ಟಗಳಿಗೆ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ ಪ್ರಥಮ ಆದ್ಯತೆ, ಗೌರವ ದೊರಕಬೇಕಿದೆ. ಹಾಗೊಮ್ಮೆ ಯಾವುದೇ ಇಲಾಖೆಯಲ್ಲಿ ಸೈನಿಕರಿಗೆ ಅಗತ್ಯ ಕೆಲಸ ಕಾರ್ಯಗಳು ನಡೆಯದೆ, ಅಗೌರದಿಂದ ನಡೆಸಿಕೊಳ್ಳಲಾಗಿದೆ ಎಂದಾದಲ್ಲಿ ತನಗೆ ತಿಳಿಸಿ, ಆ ಸಂದರ್ಭ ತಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾಜಿ ಸೈನಿಕರೊಂದಿಗೆ ತಾನಿದ್ದೇನೆ ಎಂದು ಡಾ. ಮಂತರ್ ಗೌಡ ಭರವಸೆ ನೀಡಿದರು. ಕಾರ್ಯಕ್ರಮದ ಸಂಚಾಲಕ ಅನಿಲ್ ಎಚ್.ಟಿ. ಅವರು ಮಾತನಾಡಿ, ಯೋಧರೊಂದಿಗೆ ಸಮರಗಳಲ್ಲಿ ಹುತಾತ್ಮರಾದ ಸೈನಿಕರ ವೀರನಾರಿಯರನ್ನು ಸಮಾಜ ಕಾಳಜಿಯಿಂದ ನೋಡಬೇಕು. ಯುದ್ದ ಮುಗಿಯಬಹುದು. ಆದರೆ ಯುದ್ದ ಮುಕ್ತಾಯವಾದ ಬಳಿಕವೇ ವೀರನಾರಿಯರ ಬದುಕಿನ ಯುದ್ದ ಪ್ರಾರಂಭವಾಗುತ್ತದೆ ಎಂದರಲ್ಲದೇ, ಕುಟುಂಬವನ್ನು ಸಲಹುವ ಬಹು ದೊಡ್ಡ ಹೊಣೆಗಾರಿಕೆ ವೀರನಾರಿಯರ ಮೇಲಿರುತ್ತದೆ ಎಂದೂ ಅವರು ಹೇಳಿದರು. ಪಿತೃದೇವೋಭವ, ಆಚಾರ್ಯ ದೇವೋಭವ ಎಂಬಂತೆ ಯೋಧ ದೇವೋಭವ ಎಂಬ ಮಂತ್ರ ನಮ್ಮೆಲ್ಲರ ಮನದಲ್ಲಿಯೂ ಹಾಸುಹೊಕ್ಕಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ಮಾಜಿ ಯೋಧರ ಕೆಲಸಗಳನ್ನು ಆದ್ಯತೆಯ ಮೇರೆ ಪರಿಗಣಿಸುವಂತೆಯೂ ಅನಿಲ್ ಸರ್ಕಾರಕ್ಕೆ ಸಲಹೆ ನೀಡಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 1999ರ ಮೇ 3 ರಿಂದ ಜು.26 ರ ವರೆಗೆ 85 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ನೂರಾರು ವೀರ ಯೋಧರು ಹುತಾತ್ಮರಾಗಿದ್ದಾರೆ. ರಾಷ್ಟ್ರ ರಕ್ಷಣೆಗಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಮೂರು ವರ್ಷಗಳ ಹಿಂದೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಯೋಧರ ಸ್ಮರಣೆ ಕಾರ್ಯಕ್ರಮ ಆರಂಭಿಸಿತು. ಇಂತಹ ಕಾರ್ಯಕ್ರಮಗಳ ಮೂಲಕ ಭಾರತೀಯ ಸೇನೆಯಲ್ಲಿರುವ ಯೋಧರಿಗೆ ನೈತಿಕ ಸ್ಥೈರ್ಯವನ್ನು ತುಂಬುವ, ಅವರ ರಕ್ಷಣೆಗೆ ಪ್ರಾರ್ಥಿಸುವ ಕಾರ್ಯ ಮನೆ ಮನೆಗಳಲ್ಲಿ ನಡೆಯಲಿ ಎಂದು ಹಾರೈಸಿದರು. ಅನುರಣಿಸಿದ ದೇಶ ಭಕ್ತಿ ಗೀತೆ- “ಭಾರತೀಯ ವೀರರೆ..” ಪ್ರತಿಯೊಬ್ಬರ ಮನದಲ್ಲಿ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವಂತೆ ಭಾರತೀಯ ವೀರರೇ ಎಂಬ ಭಾವಪೂರ್ಣ ದೇಶಭಕ್ತಿಯ ಮೂಲಕ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿ ಜಿ.ಚಿದ್ವಿಲಾಸ್, ಯೋಧರ ಗಾನ ನಮನಕ್ಕೆ ಮುನ್ನುಡಿ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡಗು ಜಿಲ್ಲೆಯ ಸಹಯೋಗದಲ್ಲಿ ಮೈಸೂರಿನ, ರಾಜೇಶ್ ಪಡಿಯಾರ್ ಹಾಗೂ ಡಾ.ರಶ್ಮಿ ಅವರ ಸಂಗೀತ ತಂಡ ವಿವಿಧ ದೇಶಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ ಅವಿಸ್ಮರಣೀಯಗೊಳಿಸಿದರು.
ಕೊಡಗಿನ ವಿಕ್ರಂ ಜಾದೂಗಾರ್ ಮೂರು ಪ್ರತ್ಯೇಕವಾದ ಕೇಸರಿ-ಬಿಳಿ-ಹಸಿರು ಬಣ್ಣದ ಬಟ್ಟೆಯ ತುಂಡುಗಳನ್ನು ತಮ್ಮ ಮ್ಯಾಜಿಕ್ ಮೂಲಕ ರಾಷ್ಟ ಧ್ವಜವನ್ನಾಗಿ ಕೈ ಚೀಲದಿಂದ ಶಾಸಕ ಡಾ.ಮಂಥರ್ ಗೌಡ ಲೆ.ಕರ್ನಲ್ ಕಾವೇರಿಯಪ್ಪ ಅವರಿಂದ ಹೊರತೆಗೆಸುವ ಮೂಲಕ ಗಮನ ಸೆಳೆದರು.
ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಬಿ.ಜಿ.ಅನಂತಶಯನ ಉದ್ಘಾಟಕರ ಪರಿಚಯ ಮಾಡಿದರು. ಜಿಲ್ಲೆಯಾದ್ಯಂತ 143 ಸಂಘ ಸಂಸ್ಥೆಗಳ ಸದಸ್ಯರು ಗೌಡ ಸಮಾಜದ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರು. ಬಂದವರಿಗೆಲ್ಲರಿಗೂ ಆಯೋಜಕರ ವತಿಯಿಂದ ತ್ರಿವರ್ಣದ ಬ್ಯಾಡ್ಜ್ಗಳನ್ನೂ ನೀಡಲಾಗಿತ್ತು. ಯೋಧರಿಗೆ ಗೌರವಾರ್ಪಣೆ. ಕಾರ್ಯಕ್ರಮಕ್ಕೆ ಕೊಡಗು ಗೌಡ ಸಮಾಜ, ಕೊಡಗು ಡಿಸಿಸಿ ಬ್ಯಾಂಕು, ಶಕ್ತಿ ಪ್ರತಿಷ್ಠಾನ, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಘಟಕ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಮೂರ್ನಾಡು, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್, ಜ್ಞಾನಗಂಗಾ ರೆಸಿಡೆನ್ಷಿಯಲ್ ಸ್ಕೂಲ್, ಹಾರಂಗಿ, ಮಡಿಕೇರಿ ಇನ್ನರ್ ವೀಲ್, ಕೊಡಗು ಜಿಲ್ಲಾ ಸೌಂಡ್ಸ್ ಲೈಟ್ಸ್ ಶಾಮಿಯಾನ, ಡೆಕೋರೇಷನ್ ಮಾಲೀಕರ ಸಂಘ, ಕೊಡಗು ಪತ್ರಿಕಾಭವನ ಟ್ರಸ್ಟ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್, ಕೊಡಗು ಮಡಿಕೇರಿಯ ಸ್ವಾಮಿ ಅಯ್ಯಪ್ಪ ಪ್ಲವರ್ ಸ್ಟಾಲ್ ಸಹಕಾರ ನೀಡಿದ್ದವು. ಮಾಜಿ ಯೋಧರು ಪ್ರಾರಂಭದಲ್ಲಿ ಪುಪ್ಪ ನಮನ ಸಲ್ಲಿಸಿದರೆ, ಸುಂಟಿಕೊಪ್ಪದ ವಿಶೇಷ ಚೇತನರ ಸ್ವಸ್ಥ ಶಾಲಾ ವಿದ್ಯಾರ್ಥಿಗಳು ಯೋಧ ಸ್ಮಾರಕಕ್ಕೆ ಪುಪ್ಪ ನಮನ ಸಲ್ಲಿಸಿದಾಗ ಸಬಾಂಗಣದಲ್ಲಿ ಭಾವಪೂರ್ಣ ಸನ್ನಿವೇಶ ಸೃಷ್ಟಿಯಾಯಿತು. ಆಗಿಂದಾಗ್ಗೆ ದೇಶಪ್ರೇಮದ ಘೋಷಣೆಗಳು, ಮೊಳಗಿದವು. ಜಿಲ್ಲೆಯ ವಿವಿಧೆಡೆಗಳ ಮಾಜಿ ಸೈನಿಕ ಸಂಘಟನೆಗಳ ಸದಸ್ಯರೂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಯೋಧರು ವೇದಿಕೆಗೆ ಬರುತ್ತಿರುವಂತೆಯೇ ಪುಪ್ಪಾರ್ಚನೆ ಮಾಡಿ ಗೌರವ ನೀಡಲಾಯಿತು.









