ಸುಂಟಿಕೊಪ್ಪ ಜ.9 : ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅದುವೆ ಕನ್ನಡದ ಹಿರಿಮೆ ಗರಿಮೆ ಎಂದು ಕೊಡಗು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದ್ದಾರೆ.
ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಜಿಲ್ಲಾ ಕ.ಸಾ.ಪ ಮತ್ತು ಕುಶಾಲನಗರ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಸುವರ್ಣ ಕರ್ನಾಟಕ-50 ರ ಅಂಗವಾಗಿ “ಕನ್ನಡ ಕೊಡವ ಭಾಷೆ ಬೆಳವಣಿಗೆ” ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಕರ್ನಾಟಕದ ಭಾಷೆ ಸಂಸ್ಕೃತಿ ಪದ್ಧತಿ ಪರಂಪರೆ ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇವೆಲ್ಲಾವೂ ಕನ್ನಡ ಭಾಷೆಯ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹೊರಹೊಮ್ಮಿದ್ದು, ಈ ಹಿನ್ನೆಯಲ್ಲಿ ಕನ್ನಡಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ದೇಶಿಯ ಭಾಷೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ಅವರು ಬಣ್ಣಿಸಿದರು.
ಕನ್ನಡ ಭಾಷೆ ಕೊಡವ, ತುಳು, ಬ್ಯಾರಿ, ಅರೆಭಾಷೆ ಮತ್ತು ಕೊಂಕಣಿ ಭಾಷೆಗಳಿಗೆ ಲಿಪಿಯಾಗಿದ್ದು, ಇತ್ತೀಚೆಗೆ ಕೊಡವ ಭಾಷೆಯಲ್ಲಿ ಹೊಸಲಿಪಿ ಅನುಷ್ಠಾನವಾಗಿ ನಿಧನವಾಗಿ ಬಳಕೆಗೆ ಬರುತ್ತಿದೆ ಎಂದು ಹೇಳಿದ ಟಿ.ಪಿರಮೇಶ್ ಅವರು ಈ ಹಿಂದೆಯೂ ಕೊಡವ ಲಿಪಿ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನಗಳು ಆಗಿದ್ದವು ಎಂಬುದನ್ನು ಉಲೇಖೀಸಿದರು.
ವಿಶೇಷವಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲಾ ಪ್ರಕಾರದ ಕೊಡವ ಸಾಹಿತ್ಯ ಪ್ರಕಟಣೆಗಳು ಬೆಳಕು ಕಂಡವು ಎಂದು ಹೇಳಿದ ರಮೇಶ್, ಅಕಾಡೆಮಿಯ ಜೊತೆಗೆ ಕೊಡವ ಮಕ್ಕಡಕೂಟ, ಕೊಡವ ಎಳ್ತ್ಕಾರಡ ಕೂಟ ಹಾಗೂ ಕೊಡವ ಪೊಮ್ಮಕ್ಕಡ ಪರಿಷತ್ ಸಾಕಷ್ಟು ಪುಸ್ತಕಗಳನ್ನು ಕೊಡವ ಭಾಷೆಯಲ್ಲಿ ಹೊರತಂದಿದ್ದು, ಕೊಡವ ಭಾಷೆ ಪತ್ರಿಕೆಗಳಾದ ಬ್ರಹ್ಮಗೀರಿ, ಪೂಮ್ಮಾಲೆ, ತೂಕುಬೊಳಕ್ ಕೊಡವ ಭಾಷ ಲೇಖಕರನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿವೆ ಎಂದು ರಮೇಶ್ ಹೆಮ್ಮಯಿಂದ ನುಡಿದರು.
ಕರ್ನಾಟಕ ರಾಜ್ಯವನ್ನು ಕದಂಬ, ಗಂಗಾ, ಚಾಳುಕ್ಯ, ಹೊಯ್ಸಳ, ವಿಜಯನಗರದ ಅರಸರು ಮೈಸೂರು ಒಡೆಯರು ಆಳಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಶಿಲ್ಪಕಲೆ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಅಸಾಮಾನ್ಯ ಮತ್ತು ಅನುಕರಣೀಯ ಎನ್ನಬಹುದಾದ ಸಾಧನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಕೊಡಗಿನಲ್ಲಿ ಎಲ್ಲಾಭಾಷೆ ಮತ್ತು ಧರ್ಮ ಆಚರಿಸುವ ಜನರಿದ್ದು, ಇದು ಮಾದರಿ ಜಿಲ್ಲೆಯಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಮತ್ತು ಕೊಡವ ಭಾಷೆಯ ಪರಸ್ಪರ ಭಾಂದವ್ಯ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ದಿವಂಗತ ಮೊಣ್ಣಂಡ.ಕೆ.ಚಂಗಪ್ಪ ಅವರ ಹೆಸರಿನಲ್ಲಿ ಅವರ ಪತ್ನಿ ಸರಸ್ವತಿ ಮತ್ತು ಸಹೋದರ ಜೀವನ್ ಚಿಣ್ಣಪ್ಪ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ದತ್ತಿನಿಧಿ ಸ್ಥಾಪಿಸಿದ್ದು, ಒಂದು ಮಹತ್ವದ ವಿಚಾರವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕಸಾಪ ಹೋಬಳಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು.
ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪದ ಜಿಲ್ಲಾ ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಲು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕಸಾಪ ತಾಲೂಕು ಸಮಿತಿ ಖಜಾಂಜಿ ಕೆ.ವಿ.ಉಮೇಶ್, ಜಿಲ್ಲಾ ಸಮಿತಿ ಸದಸ್ಯ ರಾಜನ್, ಸುಂಟಿಕೊಪ್ಪ ಹೋಬಳಿ ಕಸಾಪ ಉಪಾಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರುಗಳಾದ ರೆ.ಫಾ.ವ. ನವೀನ್ ಮತ್ತಿತರರು ಇದ್ದರು.
ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಸುನಿಲ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.









