ಕುಶಾಲನಗರ,ಫೆ.17 NEWS DESK : ಹಕ್ಕುಪತ್ರಕ್ಕಾಗಿ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ಅಕ್ರಮಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಆದಷ್ಟು ಬೇಗನೇ ಹಕ್ಕುಗಳನ್ನು ನೀಡಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಕುಶಾಲನಗರ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಪತ್ರ ನೀಡಿದರು.
ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ನೂರಾರು ಜನರು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದಿದೆ. ಸರ್ಕಾರಿ ಸೌಲಭ್ಯ ಹಾಗೂ ಇನ್ನಿತರ ಅನುಕೂಲಗಳನ್ನು ಪಡೆಯಲು ಸಾರ್ವಜನಿಕರಿಗೆ ಹಕ್ಕುಪತ್ರ ಅತ್ಯಗತ್ಯವಾಗಿದೆ. ದಿನೇ ದಿನೇ ಸಾರ್ವಜನಿಕರು ಹಕ್ಕುಪತ್ರಕ್ಕಾಗಿ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗನೇ ಸಾರ್ವಜನಿಕರಿಗೆ ಹಕ್ಕುಪತ್ರವನ್ನು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ 5000 ಸಾವಿರ ಹಕ್ಕುಪತ್ರಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ಕೆಲವರ ಹಕ್ಕುಪತ್ರದಲ್ಲಿ ಅಳತೆಯ ವ್ಯತ್ಯಾಸ ಕಂಡುಬಂದಿದೆ. ಅವುಗಳನ್ನು ಕೂಡಾ ಸರಿಪಡಿಸಿಕೊಡಬೇಕು ಎಂದು ಕೆ.ಬಿ.ಶಂಶುದ್ಧೀನ್ ಮನವಿ ಮಾಡಿದ್ದಾರೆ.
ಆದಷ್ಟು ಬೇಗನೇ ಸಾರ್ವಜನಿಕರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಶಿಲ್ದಾರ್ ಕಿರಣ್ ಗೌರಯ್ಯ ಭರವಸೆ ನೀಡಿದ್ದಾರೆ.









