ಮಡಿಕೇರಿ ಫೆ.21 NEWS DESK : ವಿಶ್ವರಾಷ್ಟ್ರ ಸಂಸ್ಥೆಯ ಅಂತರ ರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
2024ರ ವಿಶ್ವ ಮಾತೃಭಾಷಾ ದಿನದಂದು ಯುನೆಸ್ಕೋ “ಜಗತ್ತಿನಾದ್ಯಂತ ಮಾತೃಭಾಷೆಗಳಲ್ಲಿ ವೈವಿಧ್ಯ ಭಾಷೆಗಳ ಶಿಕ್ಷಣ ಕಲಿಕೆಗೆ ಆದ್ಯತೆ” ಎಂಬ ಘೋಷವಾಕ್ಯವನ್ನು ಮೊಳಗಿಸಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಕೊಡವ ಭಾಷೆಯನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತೀ ವರ್ಷ ಆಕ್ಸ್ಫರ್ಡ್ ಡಿಕ್ಷನರಿಯೂ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಹೊಸ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಆಕ್ಸ್ಫರ್ಡ್ ಡಿಕ್ಷನರಿ ಎರಡನ್ನು ಕೂಡ ಸಮೃದ್ಧ ಮತ್ತು ಶ್ರೀಮಂತಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಒಟ್ಟು 27 ಹಕ್ಕೊತ್ತಾಯಗಳನ್ನ ಮಂಡಿಸಿದರು.
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತಾತೆ ಕಲ್ಪಿಸಬೇಕು, ಕೊಡವ ತಕ್ಕ್ ಮಾತೃಭಾಷೆ ಹೊಂದಿರುವ ಕೊಡಗಿನ ಆದಿಮ ಸಂಜಾತ ಕೊಡವ ಬುಡಕಟ್ಟು ಕುಲವನ್ನು ಪ್ರಿಮೇಟಿವ್ ಟ್ರೈಬ್ ಎಂದು ಪರಿಗಣಿಸಬೇಕು ಮತ್ತು ಕೊಡವ ಬುಡಕಟ್ಟು ಕುಲವನ್ನು ಎಸ್.ಟಿ. ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು.
ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವ ವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತಪುರಂ ನಲ್ಲಿರುವ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಮತ್ತು ಟೋಕಿಯೋದಲ್ಲಿರುವ ವಿಶ್ವಸಂಸ್ಥೆ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು.
ಕೊಡವರ ಭಾಷೆ ಮತ್ತು ಭೂಮಿ ಉಳಿಯಬೇಕಾದರೆ ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು. ಕೊಡವ ತಕ್ಕನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350 ಬಿ ವಿಧಿಯಡಿ ಪರಿಗಣಿಸಬೇಕು.
ಕೊಡವ ಭಾಷೆಯನ್ನು ಸಂವಿಧಾನದ 347ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು. ಕೊಂಕಣಿ ಮತ್ತು ಫ್ರೆಂಚ್ ಭಾಷೆಯ ಮಾದರಿಯಲ್ಲಿ ರಾಜ್ಯದ ಎರಡನೇ ಭಾಷೆಯಾಗಿ ಕೊಡವ ಭಾಷೆಯನ್ನು ಪರಿಗಣಿಸಬೇಕು.
ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಸಂವಿಧಾನದ 7ನೇ ತಿದ್ದುಪಡಿ ಅಡಿಯಲ್ಲಿ 1956 ರ ರಾಜ್ಯ ಪುನರ್ಘಟನಾ ಕಾಯ್ದೆ ಅನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ನೀಡಬೇಕಾಗಿತ್ತು. ಆದರೆ ನಮ್ಮನ್ನು ವಂಚಿಸಿ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಕೊಡವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು.
ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೆ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸಬೇಕು. ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ ಕೈಲ್ಪೊವ್ದ್, ಎಡಮ್ಯಾರ್, ಕಕ್ಕಡ ಪದ್ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಇತ್ಯಾದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು. ಕೊಡವ ಭಾಷಾ ವಾರ್ತೆಯನ್ನು ದೂರದರ್ಶನ (ಡಿ.ಡಿ 1) ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಭಿತ್ತರಿಸಬೇಕು. ಕೊಡವ ಭಾಷೆಯ ವಿಶೇಷ ಅಧ್ಯಾಯವನ್ನು ಪ್ರಸಾರ ಭಾರತಿ ವಾರ್ತೆಯಲ್ಲಿ ಪ್ರಾರಂಭಿಸಬೇಕು. ಬಿಬಿಸಿಯಲ್ಲಿ ಪಸ್ತೂನ್, ಖುರ್ದಿ ಭಾಷೆಗಳ ವಿಶೇಷ ಅಧ್ಯಾಯ ಪ್ರಾರಂಭಿಸಿದಂತೆ ಕೊಡವ ಭಾಷೆಯ ಅಧ್ಯಾಯ ಪ್ರಾರಂಭಿಸಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು.
ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್ನಲ್ಲಿ ಕೊಡವ ಬುಡಕಟ್ಟು ಜಾನಪದ ಲೋಕದ ಸಾಂಸ್ಕೃತಿಕ ಅನನ್ಯತೆ ಮತ್ತು ಪಾರಂಪರಿಕ ಅಪೂರ್ವತೆಯನ್ನು ಅಧಿಕೃತವಾಗಿ ದಾಖಲಿಸಬೇಕು. ಡೆಲ್ಲಿ ಹಟ್ನಲ್ಲಿ ಕೊಡವ ಅಡುಗೆಯನ್ನು ಹೊರತುಪಡಿಸಿ ದೇಶದ ವಿವಿಧ ಜನಾಂಗೀಯ ಬುಡಕಟ್ಟುಗಳ ಅಡುಗೆ ಮತ್ತು ತಿನಿಸುಗಳ ಮಳಿಗೆ ಸ್ಥಾಪಿಸಲ್ಪಟ್ಟಿದ್ದು, ಕೊಡವ ಸಾಂಪ್ರದಾಯಿಕ ತಿನಿಸು/ಅಡುಗೆಯ ಮಳಿಗೆಯನ್ನು ಕೂಡವ ಸ್ಥಾಪಿಸಬೇಕು.
ಕೊಡವ ಕುಲದ ಧಾರ್ಮಿಕ ಸಂಸ್ಕಾರವಾದ ತೋಕ್ (ಕೋವಿ) ಹಕ್ಕನ್ನು ಸಿಕ್ಕರ ಕೃಪಾಣ್ ಮಾದರಿಯಲ್ಲಿ ಸಂವಿಧಾನಾತ್ಮಕವಾಗಿ ರಕ್ಷಿಸಬೇಕು. ಭೂಮಿ ಮತ್ತು ಭಾಷೆ ಒಂದು ನಾಣ್ಯದ ಎರಡು ಮುಖವಿದ್ದಂತೆ. ಇವೆರಡು ಒಂದಕ್ಕೊಂದು ಪರಸ್ಪರ ಅವಲಂಬಿತ. ಹಾಗಾಗಿ ಕೊಡವ ಭಾಷೆಯೊಂದಿಗೆ ಕೊಡವರ ಸಾಂಪ್ರದಾಯಿಕ, ಪಾರಂಪರಿಕ, ಸಾಮುದಾಯಿಕ, ಭೂಮಿಯನ್ನ ಸಂವಿಧಾನದ 371ನೇ ವಿಧಿ ಅನ್ವಯ ಸಂರಕ್ಷಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದೇಶದಲ್ಲಿ ನೆಲೆಸಿರುವ ಅಂದರೆ ಪ್ರಮುಖವಾಗಿ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾಗಳಲ್ಲಿ ನೆಲೆಸಿರುವ ಕೊಡವರನ್ನು ಆ ದೇಶಗಳ ಜನಗಣತಿ ನಡೆಯುವ ಸಂದರ್ಭ ಕೊಡವರಿಗಾಗಿಯೇ ಪ್ರತ್ಯೇಕ ಕೋಡ್ ನಿಗದಿಗೊಳಿಸಬೇಕು.
ಸಾಹಿತ್ಯ ಅಕಾಡೆಮಿಗಳು ಕೊಡವರ ಮೂಲ ಸಾಹಿತ್ಯವನ್ನು ಜತನದಿಂದ ಕಾಪಾಡಿ ವಿಸ್ತರಿಸುವ ಬದಲು ಕೊಡವರ ಮೂಲ ಜಾನಪದ ಇತಿಹಾಸವನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಕೈ ಹಾಕಿದೆ. ಕೊಡವ ಜಾನಪದದ ಲಿಖಿತ ದಾಖಲೆಯಾದ ಪಟ್ಟೋಳೆ ಪಳಮೆಯ ಅಧ್ಯಾಯವನ್ನು ಕಿತ್ತೊಗೆಯಲು ದುಸ್ಸಾಹಸ ಮೆರೆಯುತ್ತಿದೆ ಮತ್ತು ಜನಾಂಗವೊಂದಕ್ಕೆ ಇಲ್ಲದಂತಹ ನಕಲಿ ದೇವನೆಲೆಯನ್ನು ಸೃಷ್ಟಿಸಿದೆ. ಈ ಎರಡು ಕೃತ್ಯಗಳಿಗೋಸ್ಕರ ಜನರ ತೆರಿಗೆಯಿಂದ ಸಂಗ್ರಹವಾದ ಸರಕಾರದ ಹಣವನ್ನು ಅನಾವಶ್ಯಕ ಪೋಲುಮಾಡಲಾಗಿದೆ. ಈ ಪ್ರಕರಣದ ರೂವಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಕರ್ನಾಟಕದ ಆಡಳಿತಾಂಗದ ಏಜೆಂಟರು ಕೊಡವರ ಗ್ರಾಮ ಮತ್ತು ಹಬ್ಬಗಳ ಜಾನಪದ ಹೆಸರುಗಳನ್ನು ಅರ್ಥಹೀನಗೊಳಿಸುತ್ತಿದ್ದು, ಇದನ್ನು ತಡೆಯಬೇಕು. ಕೊಡವ ಭಾಷಾಭಿವೃದ್ಧಿಗೆ ಮತ್ತು ಕೊಡವ ಭಾಷಾ ಜ್ಞಾನ ಭಾಷಾಂತರಗೊಂಡು ಜಗತ್ತಿಗೆ ವಿಸ್ತರಿಸುವ ಸಲುವಾಗಿ ಕೊಡವ ಸಾಫ್ಟ್ವೇರ್ ಆವಿಷ್ಕರಿಸಬೇಕು. 2ನೇ ವಿಶ್ವಮಾಹಾಯುದ್ದಾದಲ್ಲಿ ಭಾಗಿಯಾಗಿ ಹುತಾತ್ಮಾರಾದ ಭಾರತದ ಎಲ್ಲಾ ರೆಜಿಮೆಂಟ್ ಗಳ ಹುತಾತ್ಮಾರ ಜಾಗತಿಕ ಸ್ಮಾರಕವನ್ನು ಬ್ರಿಟನ್ ಸರಕಾರ ಸ್ಕಾಟ್ಲ್ಯಾಂಡ್ ನಲ್ಲಿರುವ ಗ್ಲಾಸ್ಕೋದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಇದರಲ್ಲಿ 2ನೇ ಮಹಾಯುದ್ಧದಲ್ಲಿ ಭಾಗಿಗಳಾದ ಕೊಡವ ಯೋಧರು ಹಾಗೂ ಕೊಡಗು ರೆಜಿಮೆಂಟ್ ನ ಹೆಸರನ್ನು ಪ್ರತ್ಯೇಕವಾಗಿ ಪರಿಗಣಿಸಿ ದಾಖಲಿಸಬೇಕು.
ಕೊಡವರ ಹಬ್ಬ ಹರಿದಿನಗಳ ಹೆಸರುಗಳನ್ನು ಕನ್ನಡೀಕರಣಗೊಳಿಸದೆ ಕೊಡವ ಸಾಂಪ್ರದಾಯಿಕ ಪದಗಳನ್ನೇ ಬಳಸಬೇಕು. ಇಂಗ್ಲೀಷ್ ಸಾಫ್ಟೆವೇರ್ನಲ್ಲಿ ಕೊಡಗು ಜಿಲ್ಲೆಯನ್ನು ಮಡಿಕೇರಿ ಜಿಲ್ಲೆ ಎಂದು ಪದೇ ಪದೇ ನಮೂದಿಸುವ ಮೂಲಕ ದಾಷ್ಟ್ರತನ ಮೆರೆಯಲಾಗುತ್ತಿದೆ. ಕೊಡಗು ಹೆಸರು ಕೊಡವ ಭಾಷೆಯಿಂದ ವಿಕಾಸಗೊಂಡದ್ದಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯನ್ನು ಇಂಗ್ಲೀಷ್ನಲ್ಲಿ ಭಾಷಾಂತರಿಸುವಾಗ ಮಡಿಕೇರಿ ಜಿಲ್ಲೆ ಎಂದು ನಮೂದಿಸದೇ ಕೊಡಗು ಎಂದೇ ನಮೂದಿಸುವ ಮೂಲಕ ಕೊಡವರ ಭಾವನೆಗಳಿಗೆ ಗೌರವ ಕೊಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಜನ್ಮನೀಡಿದ ತಾಯಿ, ಮಾತೃಭಾಷೆ ಮತ್ತು ಭೂತಾಯಿ ಈ ಮೂರು ಪವಿತ್ರ ಅಂಶಗಳು ಭೂಮಂಡಲದ ಪ್ರತಿಯೊಬ್ಬ ಮಾನವಜೀವಿಯ ಆತ್ಮವಾಗಿದೆ. ಮಾತೃಭಾಷೆಯು ಜೀವಿತದ ಆತ್ಮವಾಗಿದೆ, ಮಾತೃಭಾಷೆ ನಮ್ಮ ಕಣ್ಣು ಇದ್ದಂತೆ. ಅನ್ಯಭಾಷೆ ನಾವು ಹಾಕಿಕೊಳ್ಳುವ ಕನ್ನಡಕ ಇದ್ದಂತೆ ಎಂದು ಅವರು ಪ್ರತಿಪಾದಿಸಿದರು.
ಕೊಡಗರು ಎಂದು ಕಾಗುಣಿತ ದೋಷದಿಂದ ವಿರೂಪಗೊಂಡಿದ್ದ ಕೊಡವ ಸಮುದಾಯದ ಸೂಚಕ ಪದವನ್ನು ಕೊಡಗರು ಬದಲಿಗೆ “ಕೊಡವ” ಎಂದು ನಮೂದಿಸಲು ಸಿ.ಎನ್.ಸಿ ಯ ಪ್ರಯತ್ನದಿಂದ ಡಾ.ದ್ವಾರಕನಾಥ್ ನೇತೃತ್ವದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿದ್ದರೂ ಈ ಹಿಂದಿನ ಸರ್ಕಾರದ ವಿಳಂಬದ್ರೋಹದಿಂದ ಗಜೆಟ್ ನೋಟಿಫಿಕೇಷನ್ ಆಗಿರಲಿಲ್ಲ. ಆದರೆ ಪ್ರಸ್ತುತ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಿ.ಎನ್.ಸಿ ಮನವಿಗೆ ತಕ್ಷಣ ಸ್ಪಂದಿಸಿ “ಕೊಡವ” ಎಂದು ನಮೂದಿಸಲು ಗಜೆಟ್ ನೋಟಿಫಿಕೇಷನ್ ಹೊರಡಿಸುವ ಮೂಲಕ ಕೊಡವರ ಅಭಿನಂದನೆಗೆ ಪಾತ್ರವಾಗಿದೆ ಎಂದರು.
ಧರಣಿಯಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಶ್ರೀಮತಿ ಚೋಳಪಂಡ ಜ್ಯೋತಿ ನಾಣಯ್ಯ, ಶ್ರೀಮತಿ ಅಜ್ಜಿನಿಕಂಡ ಇನಿತಾ ಮಾಚಯ್ಯ, ಸರ್ವಶ್ರೀ ಕಾಂಡೇರ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ವಿಜು, ಚೋಳಪಂಡ ನಾಣಯ್ಯ, ಪುದಿಯೊಕ್ಕಡ ಕಾಶಿ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಅಜ್ಜಿನಿಕಂಡ ಸನ್ನಿ, ಅಪ್ಪೆಯಂಗಡ ಮಾಲೆ, ಕೋಡಿರ ರತನ್, ಮಣವಟ್ಟಿರ ಸ್ವರೂಪ್, ನಂದೇಟಿರ ಸುಬ್ಬಯ್ಯ, ಮೇದುರ ಕಂಠಿ, ಅಪ್ಪರಂಡ ಪ್ರಸಾದ್, ಅವರೆಮಾದಂಡ ಚಂಗಪ್ಪ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೊಡವ ಕೊಡವತಿಯರು ಸಂವಿಧಾನಿಕ ಹಕ್ಕೊತ್ತಾಯಗಳ ಸಾಧನೆಗಾಗಿ ಗುರು-ಕಾರೋಣ, ಧಾರ್ಮಿಕ ಸಂಸ್ಕಾರ ಕೋವಿ, ಸೂರ್ಯ-ಚಂದ್ರ, ಭೂದೇವಿ, ದೈವಿಕ ಜಲದೇವಿ ಕಾವೇರಿ ಮತ್ತು ವನದೇವತೆ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.








