ಸೋಮವಾರಪೇಟೆ ಫೆ.22 NEWS DESK : ಎಸ್ವೈಎಸ್ ಮತ್ತು ಎಸ್ಎಸ್ಎಫ್ ಸೋಮವಾರಪೇಟೆ ಸರ್ಕಲ್ ವತಿಯಿಂದ ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆಯಿತು.
ಶಿಬಿರಕ್ಕೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಚಾಲನೆ ನೀಡಿದರು. ನಂತರ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಿದೆ, ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಎರಡು ಮೂರು ದಿನಗಳಿಗೊಮ್ಮೆಯಾದರೂ, ರಕ್ತದಾನ ಶಿಬಿರಗಳು ನಡೆದಲ್ಲಿ ಸಮಸ್ಯೆಯಿಂದ ಪಾರಾಗಬಹುದು ಎಂದು ತಿಳಿಸಿದರು.
ಜಿಲ್ಲೆಯವರೊಂದಿಗೆ ಹೊರ ಜಿಲ್ಲೆಯಿಂದಲೂ ಸಾಕಷ್ಟು ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಿರುವುದರಿಂದ ತಿಂಗಳಿಗೆ 500ಕ್ಕೂ ಹೆಚ್ಚಿನ ಯೂನಿಟ್ ರಕ್ತ ಬೇಕಾಗಿದೆ. ಎಲ್ಲ ಗುಂಪಿನ ರಕ್ತವನ್ನು ಸಂಗ್ರಹ ಮಾಡಬೇಕಿರುವುದರಿಂದ ಕೊರತೆ ಹೆಚ್ಚಾಗಿದೆ ಎಂದು ಹೇಳಿದರು.
ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಮಾಡಬೇಕು. ರಕ್ತದಾನದಿಂದ ಬೇಕಾದಷ್ಟು ಉಪಯೋಗಗಳಿವೆ. ಮೂರು ತಿಂಗಳಿಗೊಮ್ಮೆ ಅರೋಗ್ಯವಂತರು ರಕ್ತದಾನ ಮಾಡಿದರೆ, ಅನೇಕ ರೋಗಗಳಿಂದ ಮುಕ್ತರಾಗಬಹುದು.
ಕಾಯಿಲೆಗಳಿದ್ದರೆ ರಕ್ತ ಪರೀಕ್ಷೆ ಸಂದರ್ಭ ಗೊತ್ತಾಗುತ್ತದೆ. ಆಸ್ಪತ್ರೆಯಿಂದ ಗೌಪ್ಯವಾಗಿ ಮಾಹಿತಿ ತಲುಪಿಸಲಾಗುತ್ತದೆ. ಸೂಕ್ತ ಚಿಕಿತ್ಸೆಯಿಂದ ಕಾಯಿಲೆ ವಾಸಿ ಮಾಡಿಕೊಳ್ಳಹುದು. ಸಮಾಜದಲ್ಲಿದ್ದ ಮೂಡನಂಬಿಕೆ, ಭಯ ಮತ್ತು ಆತಂಕವನ್ನು ಬಿಟ್ಟು ಯುವಕ ಯುವತಿಯರು ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ. ಕಾಲೇಜಿನ ವಿದ್ಯಾರ್ಥಿಗಳಲ್ಲೂ ರಕ್ತದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದ್ದು, ಯುವ ಜನರು ಇನ್ನೂ ಹೆಚ್ಚಾಗಿ ರಕ್ತದಾನದಲ್ಲಿ ಪಾಲ್ಗೊಂಡು ಇನ್ನೊಂದು ಜೀವದ ಉಳಿವಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಎಸ್ವೈಎಸ್ ಸೋಮವಾರಪೇಟೆ ಸರ್ಕಲ್ ಅಧ್ಯಕ್ಷ ತಣೀರುಹಳ್ಳದ ಶಾಫಿ ಸಹದಿ ಮಾತನಾಡಿ, ನಮ್ಮ ಸಂಘವೂ ದೇಶದ ಸಂವಿಧಾನವನ್ನು ಗೌರವಿಸುವ ಮೂಲಕ ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ. ರಕ್ತದಾನ ಪವಿತ್ರವಾದುದು ಎಂಬುದು ನಮೆಗೆಲ್ಲರೂ ತಿಳಿದಿರುವುದರಿಂದ ಪ್ರತಿವರ್ಷ ರಕ್ತದಾನ ಶಿಬಿರ ಅಯೋಜಿಸುತ್ತಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಆಟೋಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಂಗಾಧರ್ ಮತ್ತು ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ಇದ್ದರು.










