ಮಡಿಕೇರಿ ಫೆ.22 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿಶ್ವ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ನಗರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಕ್ಕಳಿಂದ ಜಾಥಾ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾವು ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ತಲಪಿತು.
ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ವಾದ್ಯದೊಂದಿಗೆ ಸುಮಾರು 2 ಕಿ.ಮೀ ದೂರದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರದಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಜಿಮ್ಮಿ ಸಿಕ್ವೆರಾ, ಪುಷ್ಪವೇಣಿ, ಖಜಾಂಚಿ, ಹರಿಣಿ ವಿಜಯ್ ಸಹ ಕಾರ್ಯದರ್ಶಿ ಮೈಥಿಲಿರಾವ್, (ಎ.1) ದಮಯಂತಿ, ಬೊಳ್ಳಜಿರ ಅಯ್ಯಪ್ಪ, ಇತರರು ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್, ಒಲೆವ್ ಸೇಂಟ್ ಕ್ಲೇರ್ ಸೋಮ್ಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರದಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ 216 ದೇಶದಲ್ಲಿರುವ ಸಂಘಟನೆ, ತರಬೇತಿ, ಶಿಸ್ತು, ಸಂಯಮ, ಅಭಿನಯ ಮತ್ತು ಚಿಂತನೆ ಪರೋಪಕಾರ ಸಮಾಜಮುಖಿ ಕಾರ್ಯ, ಪರಿಸರ ರಕ್ಷಣೆ, ದಿನಕ್ಕೊಂದು ಒಳ್ಳೆಯ ಕೆಲಸ ಮಾಡುವುದು, ಒಟ್ಟಾರೆ ವ್ಯಕ್ತಿತ್ವ ನಿರ್ಮಾಣ ಇಂದು ಚಿಂತನಾ ದಿನವನ್ನಾಗಿಯೂ ಆಚರಣೆ. ಸಕಾರಾತ್ಮಕ ಚಿಂತನೆ, ದೃಢತೆ, ವಿಶ್ವಾಸ ಮೂಡಿಸುವುದು. ನಕಾರಾತ್ಮಕ ಚಿಂತನೆ ಬಿಡುವುದು. ಪರಿಸರ ಚೆನ್ನಾಗಿಡುವುದು. ತಂದೆ ತಾಯಿ ದುಖಿಸದೆ ಹಾಗೆ ಮಾಡುವುದು ಸ್ಕೌಟ್ಸ್ ಮತ್ತು ಗೈಡ್ಸ್ನ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದಾದರೂ ಸಂಘಟನೆಗೆ ಅದರ ಉದ್ದೇಶ ಅರಿತು ಸೇರಬೇಕು. ಒತ್ತಾಯದಿಂದ ಸೇರಬಾರದು. ತರಬೇತಿ ನಿಮ್ಮನ್ನು ಬದಲಾಯಿಸುತ್ತದೆ. ಶಿಸ್ತು ಬೆಳೆಸುತ್ತದೆ. ಸಮಾಜಮುಖಿಯಾಗಿ ಬೆಳೆಸುತ್ತದೆ ಎಂದು ತಿಳಿಸಿದರು.
ಉಪಕಾರ ಮಾಡದೇ ಇದ್ದರೂ ಪರವಾಗಿಲ್ಲ ಬೇರೆಯವರಿಗೆ ಉಪದ್ರ ಕೊಡಬೇಡಿ. ಕೊಡಗಿನಲ್ಲಿಯೂ ನೀರಿಗೆ ಬರ ಬಂತು ಇಲ್ಲಿಯೇ ಕೂಲರ್ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆರೋಗ್ಯದ ಕಡೆ ಗಮನಹರಿಸಿ ಎಂದು ಝೀವಲ್ ಖಾನ್ ಸಲಹೆ ನೀಡಿದರು. ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಪತ್ರವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.








