ಸೋಮವಾರಪೇಟೆ ಮಾ.14 NEWS DESK : ಪಟ್ಟಣದಲ್ಲಿ ಕಸವಿಲೇವಾರಿ ಕಗ್ಗಂಟಾಗಿ ಪರಿಣಮಿಸಿದ್ದು, ಸಿಕ್ಕ ಸಿಕ್ಕವರು ಕಸತಂದು ಹಾಕುತ್ತಿರುವುದರಿಂದ ವಿರಕ್ತ ಮಠದ ಜಮೀನು ಕಸದಕೊಂಪೆಯಾಗಿದೆ ಆದರೆ ಮಠದ ವ್ಯವಸ್ಥಾಪಕರಾಗಲಿ, ಪಟ್ಟಣ ಪಂಚಾಯಿತಿಯಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಜನವಸತಿ ಪ್ರದೇಶ, ಪಕ್ಕದಲ್ಲಿಯೇ ಶಾಲೆ ಹಾಗೂ ದೇವಾಲಯ ಅದರ ಸುತ್ತಾಮುತ್ತಾ ಪಾಳುಬಿದ್ದ ಜಮೀನು ಕೆಲವು ಪುಂಡ ಪೋಕರಿಗಳಿಗೆ ಹಾಗೂ ಕಸಹಾಕುವವರಿಗೆ ಇನ್ನೇನು ಬೇಕು ಇದು ಪಟ್ಟಣದ ವಾರ್ಡ್ ನ0. 3ರ ಕರ್ಕಳ್ಳಿ ರಸ್ತೆಯ ಮಠದ ಶಾಲೆ ಹಾಗೂ ಕಟ್ಟೆ ಬಸವೇಶ್ವರ ದೇವಾಲಯದ ಸಮೀಪದ ಕಥೆ-ವ್ಯಥೆ.
ಸಿಕ್ಕ ಸಿಕ್ಕವರೆಲ್ಲಾ ತಮ್ಮ ಮನೆಯ ಅನುಪಯುಕ್ತ ವಸ್ತುಗಳು, ದಿನನಿತ್ಯದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರಿಂದ ಅಕ್ಕಪಕ್ಕದ ಮನೆಯವರು, ಶಾಲೆಯ ಮಕ್ಕಳು ಮೂಗುಮುಚ್ಚಿ ಕುಳಿತುಕೊಳ್ಳಬೇಕಾಗಿದೆ.
ಮಠದ ಜಮೀನಿನಲ್ಲಿ ಹಲವು ವರ್ಷಗಳಿಂದ ಶುಂಠಿ ಕೃಷಿ ಮಾಡಿಕೊಂಡಿರುವವರು ಪಂಚಾಯಿತಿಯ ಚರಂಡಿಯನ್ನು ಮುಚ್ಚಿ ರಸ್ತೆ ಮಾಡಿಕೊಂಡಿರುವುದರಿಂದ ವಾಹನಗಳಲ್ಲಿ ಕಸವನ್ನು ತಂದು ಸುರಿಯುತ್ತಿದ್ದಾರೆ. ಕಟ್ಟಡ ಒಡೆದ ಇಟ್ಟಿಗೆ, ಸಿಮೆಂಟ್ ವಸ್ತುಗಳು, ಸಮೀಪದ ಕೋಳಿಮಾಂಸ ಅಂಗಡಿಯವರು ಚೀಲ, ಚೀಲಗಳಲ್ಲಿ ರೆಕ್ಕೆ, ಪುಕ್ಕ ಸೇರಿದಂತೆ ಅದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರಿಂದ ಇಲ್ಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಮನೆಯ ಹಳೆಯ ಕಮೊಡ್, ಟಿವಿ ಸೇರಿದಂತೆ ನಿರುಪಯುಕ್ತ ವಸ್ತುಗಳ ರಾಶಿಯೇ ಬಿದ್ದಿದೆ. ಸ್ಯಾನಿಟರಿ ಪ್ಯಾಡ್ ಗಳನ್ನು ಚೀಲಗಳಲ್ಲಿ ತಂದು ಹಾಕಲಾಗಿದೆ. ಇನ್ನು ಎಣ್ಣೆ ಪ್ರಿಯರು ಇದೇಜಾಗದಲ್ಲಿ ಎಣ್ಣೆ ಹಾಕಿಕೊಂಡು ಇಸ್ಪೀಟ್ ಆಡುವುದು ಮಾಮೂಲಿಯಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ಗಳು ಹಾರಾಡುತಿವೆ. ಹಕ್ಕಿ ಪಕ್ಷಿಗಳು,ನಾಯಿಗಳು ಕಚ್ಚಿಕೊಂಡು ರಸ್ತೆ ಹಾಗೂ ಅಕ್ಕ ಪಕ್ಕದಲ್ಲಿ ಹಾಕುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ದನಗಳು ಕೂಡ ಪ್ಲಾಸ್ಟಿಕ್ ತಿನ್ನುತಿರುವುದರಿಂದ ಅವುಗಳ ಪ್ರಾಣಕ್ಕೆ ಸಂಚಕಾರವಾಗಲಿದೆ. ಆದರೆ ಮಠದ ಜಮೀನಿನಲ್ಲಿ ಈ ರೀತಿ ರಾಶಿರಾಶಿ ಕಸ ಹಾಕುತ್ತಿದ್ದರು ಮಠದ ವ್ಯವಸ್ಥಾಪಕ ಮಾತ್ರ ಇದ್ದಾವುದು ಗೊತ್ತೇ ಇಲ್ಲದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯೆ ಮೋಹಿನಿ ತಿಳಿಸಿದ್ದಾರೆ. ತಕ್ಷಣವೇ ತಮ್ಮ ಜಮೀನಿಗೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ನೈರ್ಮಲ್ಯ ವ್ಯವಸ್ತೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯ್ತಿ ಮಾತ್ರ ತಮ್ಮ ಜವಾಬ್ದಾರಿ ಮರೆತು ಕುಳಿತಿದೆ ಬೇಸಿಗೆ ಕಾಲವಾಗಿದ್ದು ಕೋಳಿ ತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ ಗಳಂತಹ ವಸ್ತುಗಳಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇರುವುದರಿಂದ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.









