ಸೋಮವಾರಪೇಟೆ ಮಾ.15 NEWS DESK : ವಚನ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾದಲ್ಲಿ ಪ್ರತಿಯೊಬ್ಬರ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಸೋಮವಾರಪೇಟೆ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಕೆ.ಎನ್.ಧನಲಕ್ಷ್ಮಿ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಯಜಮಾನ್ ಪುಟ್ಟಮಲ್ಲಪ್ಪ ಚೆನ್ಬವೀರಮ್ಮ ಸ್ಮರಣಾರ್ಥ ಕಾಫಿ ಬೆಳೆಗಾರ ಸೋಮವಾರಪೇಟೆಯ ಎ.ಪಿ.ಶಂಕರಪ್ಪ ಅವರು ಸ್ಥಾಪಿಸಿರುವ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ತಪ್ಪದೇ ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕೆಂದು ಪ್ರಾಂಶುಪಾಲರು ಕರೆ ನೀಡಿದರು.
ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ ಹಾನಗಲ್, ಮನುಷ್ಯನ ಬದುಕಿಗೆ ದಾರಿದೀಪವಾಗಿರುವ ವಚನ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಹೆಚ್ಚಾಗಿ ತಿಳಿಸುವ ಕೆಲಸವಾಗಬೇಕಿದೆ.
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಕೂಡ, ನಿಸರ್ಗ ನಮಗೆ ನೀಡಿರುವ ಅಮೂಲ್ಯ ನೀರು, ಗಾಳಿ, ಮಣ್ಣು ಮೊದಲಾದ ಸಂಪತ್ತನ್ನು ನಾಶ ಮಾಡದ ಹಾಗೆ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರಗಳೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
“ಶರಣ ಸಂಸ್ಕ್ರತಿ ಪ್ರಸಾರ” ದತ್ತಿ ಉಪನ್ಯಾಸ ನೀಡಿದ ಐಗೂರು ಪಿಯು ಕಾಲೇಜು ಕನ್ನಡ ಉಪನ್ಯಾಸಕ ನಿಶ್ಚಯ್, ಹನ್ನೆರಡನೇ ಶತಮಾನದಲ್ಲಿ ಅಂದಿನ ಜನ ಸಾಮಾನ್ಯರಲ್ಲಿ ಮೇಲ್ವರ್ಗದ ಮಂದಿ ನೀಡುತ್ತಿದ್ದ ಮೇಲು ಕೀಳು, ಬೇಧ ಬಾವಗಳನ್ನು ಮೆಟ್ಟಿನಿಲ್ಲುವ ಮೂಲಕ ನೊಂದ ಜನರ ಧ್ವನಿಯಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಅಂಬಿಗರ ಚೌಡಯ್ಯ ಮೊದಲಾದ ಬಸವಾದಿ ಶರಣರ ಹೋರಾಟ ಹಾಗೂ ಕಾಯಕದ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಜವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ.ಎನ್.ಕುಸುಮ, ಡಾ. ಗೀತಾ, ಎಂ.ಎಂ.ಸುನೀತಾ, ಎಂ.ಎಸ್.ಶಿವಮೂರ್ತಿ, ಕೋಮಲ, ಗಾಯತ್ರಿ ಇದ್ದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜು ಪ್ರಾಂಶುಪಾಲೆ ಧನಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಚಂದನ ನಿರೂಪಿಸಿದರೆ, ನಾಸಿರ್ ಅಹಮದ್ ಸ್ವಾಗತಿಸಿದರು. ನಿಶ್ಚಿತ ವಂದಿಸಿದರು.









