ಮಡಿಕೇರಿ ಮಾ.24 NEWS DESK : ವಾರದ ಹಿಂದೆಯಷ್ಟೇ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಭೇಟಿ ನೀಡಿದ್ದ ಶಂಕಿತ ನಕ್ಸಲರು ಇದೀಗ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನಲ್ಲಿ ಸುಳಿದಾಡಿದ್ದಾರೆ ಎಂದು ತಿಳಿದು ಬಂದಿದೆ. ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಸಮೀಪದ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಮಾ.23 ರಂದು ಕಾರ್ಮಿಕರೊಬ್ಬರ ಮನೆಗೆ ಭೇಟಿ ನೀಡಿದಾಗ ಕಾರ್ಮಿಕ ಪ್ರವೇಶ ನಿರಾಕರಿಸಿ ಬಾಗಿಲು ಬಂದ್ ಮಾಡಿದಾಗ ಶಂಕಿತ ನಕ್ಸಲರು ತೋಟದ ಮಾಲೀಕರ ಮನೆಗೆ ಹೋಗಿದ್ದಾರೆ ಎಂದು ಮಾಹಿತ್ಯ ಲಭ್ಯವಾಗಿದೆ. ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿನ ಮೂಲಕ ಸೋಮವಾರಪೇಟೆ ಮತ್ತು ಗಾಳಿಬೀಡು, ಸಂಪಾಜೆ ಮೂಲಕ ಕೇರಳದ ಅರಣ್ಯದೊಳಗೆ ಸಂಪರ್ಕ ಸಾಧಿಸಬಹುದಾಗಿದ್ದು, ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದೆ. ಕಳೆದ ವಾರವಷ್ಟೇ ನಾಲ್ವರು ಶಂಕಿತ ನಕ್ಸಲರು ಕೂಜಿಮಲೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ದಿನಸಿ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದರು.










