ಮಡಿಕೇರಿ ಜೂ.6 NEWS DESK : ಬಾಳೆಲೆ ಗ್ರಾ.ಪಂ ಯ ಸಹಯೋಗದಲ್ಲಿ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ನಡೆಯಿತು. ಶಾಲೆಯ ಪ್ರಾಂಶುಪಾಲರಾದ ಗೀತಾ ನಾಯ್ಡು ಮಾತನಾಡಿ ಪರಿಸರವು ಜೀವರಾಶಿಗಳ ತಾಣ, ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದರು. ಮಾನವ, ಇತರೆ ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವಸಂಕುಲ ಆಹಾರ ,ಗಾಳಿ ,ನೀರು ಮತ್ತು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನು ಅವಲಂಬಿಸಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಅವಶ್ಯಕತೆ ಒದಗಿ ಬಂದಿದೆ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಾ ಪರಿಸರವನ್ನು ಹಾಳು ಮಾಡುವುದನ್ನು ತಡೆಯಬೇಕಿದೆ. ಇದಕ್ಕೆ ವಿದ್ಯಾವಂತರಾದ ನಾವುಗಳು ಪರಿಸರ ಪ್ರೇಮಿಯಾಗಿ ಪರಿಸರ ಉಳಿಸುವ ಇಲಾಖೆಗಳೊಂದಿಗೆ ಹಾಗೂ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು ಮತ್ತು ಉಸಿರಿಗಾಗಿ ಪರಿಸರವನ್ನು ಇಂದು ಉಳಿಸುವ ಅತ್ಯಾವಶ್ಯಕತೆ ನಮ್ಮಲ್ಲಿದೆ. ಪ್ರತೀ ವಿದ್ಯಾರ್ಥಿಯು ಒಂದೊಂದು ಗಿಡವನ್ನು ದತ್ತು ಪಡೆದು ಅವುಗಳ ಪೋಷಣೆಯನ್ನು ಮಾಡಿ ಸಸಿಯನ್ನು ಹೆಮ್ಮರವಾಗಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದಾಗಿದೆ ಎಂದು ನುಡಿದರು. ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಚೈತನ್ಯ, ಭವೀನ್ ಬಿದ್ದಪ್ಪ ಹಾಗೂ ಪ್ರಣಿತ ದಿನದ ಮಹತ್ವವನ್ನು ತಿಳಿಸಿದರು. ಬಾಳೆಲೆ ಗ್ರಾಮ ಪಂಚಾಯಿತಿಯಿಂದ ನೀಡಲಾದ ಫಲ ಪುಷ್ಪ ಸಸಿಗಳನ್ನು ಶಿಕ್ಷಕರ ಮೇಲ್ವೀಚಾರಣೆಯಲ್ಲಿ ವಿದ್ಯಾರ್ಥಿಗಳು ನೆಟ್ಟು ಹಸಿರಿನ ಹರಿಕಾರರಾಗುವ ಪ್ರತಿಜ್ಞೆ ತೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕಿಯರಾದ ಯಶಸ್ವಿನಿ ಸಾನಿಫ್ಫಾ, ಮೋನಿಷಾ,ಸುಮಾ ,ಅಫ್ರಿನ್ , ಸೋನಿ, ಅಶ್ವಿನಿ, ದೈಹಿಕ ಶಿಕ್ಷಕರಾದ ಮಾಚಂಗಡ ಅಯ್ಯಪ್ಪ ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.









