ಸೋಮವಾರಪೇಟೆ ಜೂ.18 NEWS DESK : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದರ್ಶನ್ ವಿರುದ್ಧ ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು, ವೀರಶೈವ ಲಿಂಗಾಯತ ಸಮಾಜ ಪ್ರತಿಭಟನೆ ನಡೆಸಿದೆ. ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳು ಇಂದು ಸ್ವಾಮೀಜಿಗಳ ಸಮ್ಮುಖದಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮೃತ ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ ಇಂದು ಸಮಾಜದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ರೇಣುಕಾ ಸ್ವಾಮಿಯನ್ನು ಹಿಂಸೆಕೊಟ್ಟು ಕೊಲೆ ಮಾಡಿದ್ದಾರೆ, ಅವರ ಕುಟುಂಬ ಅನಾಥವಾಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.ಈ ರೀತಿಯ ಕೃತ್ಯಗಳು ನೆಡೆಯದಂತೆ ಯಾವುದೇ ಸರ್ಕಾರ ಇರಲಿ ಎಚ್ಚರಿಕೆ ವಹಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕಾರ್ಯ ನಡೆದಿದೆ. ಸಮಾಜ ತಿದ್ದುವಂತಹ ಜವಾಬ್ದಾರಿ ಇರುವ ವ್ಯಕ್ತಿಗಳೇ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಇದೇ ರೀತಿ ಎಲ್ಲರೂ ಮಾಡಿದರೆ ಕಾನೂನು ಸುವ್ಯವಸ್ಥೆಯ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜಕ್ಕೆ ಕಳಂಕ ತರುವ ಯಾವುದೇ ವ್ಯಕ್ತಿ ಇರಲಿ ಅವರ ಪರವಾಗಿ ನಿಲ್ಲುವ ಕೆಲಸ ಯಾರಿಂದಲೂ ಆಗಬಾರದು. ನಮ್ಮ ಕರ್ನಾಟಕ ಪೊಲೀಸರು ಯಾವುದೇ ಆಮಿಷಕ್ಕೆ ಒಳಗಾಗದೆ ದಕ್ಷತೆಯಿಂದ ಕಾರ್ಯನಿರ್ವಹಿದ್ದಾರೆ. ಪೊಲೀಸ್ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಪ್ರತಿಭಟನೆಯಲ್ಲಿ ಮುದ್ದಿನ ಕಟ್ಟೆ ಮಠದ ಶ್ರೀಅಭಿನವ ಸಿದ್ದಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀರುದ್ರಮುನಿ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀಇಮ್ಮಡಿ ಶಿವಲಿಂಗ ಸ್ವಾಮೀಜಿ,ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ದಿವಾಕರ, ಮಹಿಳಾ ಘಟಕದ ಕಾರ್ಯದರ್ಶಿ ಗೀತರಾಜು, ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ವೀರಶೈವ ಲಿಂಗಾಯತ ಅರ್ಚಕರ ಸಂಘದ ಗೌರವಾಧ್ಯಕ್ಷ ಮೋಹನ ಮೂರ್ತಿ, ಕಾರ್ಯದರ್ಶಿ ಬಸವಕುಮಾರ ಶಾಸ್ತ್ರಿ ಸೋಮವಾರಪೇಟೆ ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಗಿರೀಶ್,ಮಂಜುನಾಥ್, ಯೋಗೇಶ್, ಅಕ್ಕನ ಬಳಗದ ಉಪಾಧ್ಯಕ್ಷೆ ಗೀತ, ಪದಾಧಿಕಾರಿಗಳಾದ ರಜಿನಿ, ಅನುಪಮ, ಆಶಾ ಹೂವಯ್ಯ, ಪವಿತ್ರ ಸೇರಿದಂತೆ ವೀರಶೈವ ಲಿಂಗಾಯತ ಪ್ರಮುಖರು ಪಾಲ್ಗೊಂಡಿದ್ದರು.











