ಮಡಿಕೇರಿ ಜೂ.21 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ರಾಜಕೀಯ ದುರುದ್ದೇಶದಿಂದ ದಹಿಸಿದ ಬಿಜೆಪಿ ಮಂದಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ಆರ್.ಪಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಯಾವುದೇ ಕಾರಣವಿಲ್ಲದೆ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಪ್ರಕರಣ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗಿದೆ. ಶುದ್ಧ ರಾಜಕಾರಣದಿಂದ ಜನರ ಮನಗೆದ್ದು ಪೊನ್ನಣ್ಣ ಅವರನ್ನು ರಾಜಕೀಯವಾಗಿ ಎದುರಿಸಲಾಗದವರು ಪ್ರತಿಕೃತಿ ದಹಿಸಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವ ಉತ್ತಮ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೊನ್ನಣ್ಣ ಅವರನ್ನು ಇಡೀ ರಾಜ್ಯದ ರಾಜಕೀಯ ಕ್ಷೇತ್ರವೇ ಗೌರವದಿಂದ ಕಾಣುತ್ತಿದೆ. ಆದರೆ ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಮಂದಿ ಅಗೌರವ ತೋರುವ ಮೂಲಕ ಕೊಡಗಿನ ಜನರನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎ.ಎಸ್.ಪೊನ್ನಣ್ಣ ಅವರು ತಮ್ಮ ದಕ್ಷ ಆಡಳಿತ ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದ ಜನಪ್ರಿಯತೆ ಹಾಗೂ ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮಂದಿ ಪ್ರತಿಭಟನೆಯ ನೆಪದಲ್ಲಿ ಪೊನ್ನಣ್ಣ ಅವರ ಕ್ಷೇತ್ರದಲ್ಲಿ ಪೊನ್ನಣ್ಣ ಅವರನ್ನು ಅವಮಾನಿಸುವ ಕೀಳು ಮಟ್ಟದ ರಾಜಕಾರಣಕ್ಕೆ ಕೈಹಾಕಿದ್ದಾರೆ. ಕ್ಷೇತ್ರದ ಜನ ಬಿಜೆಪಿ ನಡೆಯಿಂದ ನೊಂದಿದ್ದು, ಪ್ರತಿಕೃತಿ ದಹಿಸಿದವರು ತಕ್ಷಣ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಕಾಂಗ್ರೆಸ್ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.








