ಸೋಮವಾರಪೇಟೆ ಆ.26 NEWS DESK : ಸೋಮವಾರಪೇಟೆ ತಾಲ್ಲೂಕು ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸೋಮವಾರಪೇಟೆ ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಮೋಹನ್ ಬೋಪಣ್ಣ ಮಾತನಾಡಿ, 2023-24ನೇ ಸಾಲಿನಲ್ಲಿ ಕಾಫಿ ಮತ್ತು ಕಾಳುಮೆಣಸು ಶೇ.70 ರಿಂದ 80ರಷ್ಟು ಫಸಲು ಹಾನಿಯಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೆಕ್ಟೇರ್ಗೆ ಕನಿಷ್ಠ 1ಲಕ್ಷ ರೂ.ಗಳ ಬೆಳೆಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 2022-23ನೇ ಸಾಲಿನಲ್ಲಿ ವಾಡಿಕೆ ಹಿಂಗಾರು ಮಳೆ ಕಡಿಮೆಯಾದ ಹಿನ್ನೆಲೆ ಬಿಸಿಲಿನ ತಾಪಕ್ಕೆ ಅರೇಬಿಕಾ ಕಾಫಿ ಗಿಡಗಳು ಬಿಳಿಕಾಂಡಕೊರಕ ಕೀಟಬಾಧೆಯಿಂದ ನಾಶವಾದವು. ಮಾರ್ಚ್, ಏಪ್ರಿಲ್ನಲ್ಲಿ ಹೂಮಳೆ ಬರಲಿಲ್ಲ. ಕಡಿಮೆ ಪ್ರಮಾಣದಲ್ಲಿ ಮಳೆಬಿದ್ದು ಬಿಸಿಲಿನ ತಾಪಕ್ಕೆ ಹೂ ಸುಟ್ಟುಹೋಗಿ ನಷ್ಟವಾಯಿತು. ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.70ರಷ್ಟು ಹೆಚ್ಚಿನ ಮಳೆಯಾಗಿ ಕಾಫಿ, ಕಾಳುಮೆಣಸು ಫಸಲು ಶೇ.70 ರಷ್ಟು ಹಾನಿಯಾಗಿದೆ. ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ಬಳ್ಳಿಗಳು ನಾಶವಾಗಿವೆ. ಅರೇಬಿಕಾ ಕಾಫಿ ತೋಟಗಳು ರೋಗಪೀಡಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕಾಫಿ ವಿದೇಶಿ ವಿನಿಮಯದ ತೆರಿಗೆಯಿಂದ ಸಾವಿರಾರು ಕೋಟಿ ಆದಾಯ ಸಿಗುತ್ತಿದೆ. ಕೊಡಗಿನಲ್ಲಿ ಕಾಫಿ ಪುನಶ್ಚೇತನಕ್ಕೆ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ಸೌಲಭ್ಯಗಳು ಸಿಗದೇ ಈಗಾಗಲೇ ಕೊಡಗಿನ ಕಿತ್ತಳೆ ಅವಸಾನವಾಗಿದೆ. ಕಾಫಿ ಉದ್ದಿಮೆಗೆ ಸೌಲಭ್ಯ ನೀಡದಿದ್ದರೆ ಕೊಡಗಿನಲ್ಲಿ ಕಾಫಿ ಅವಸಾನದ ಅಂಚಿಗೆ ತಲುಪುವ ಆತಂಕವಿದೆ ಎಂದು ಎಚ್ಚರಿಕೆ ನೀಡಿದರು. ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆಯಿಂದ ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಅಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಗ್ರಾಮವಾರು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕೃಷಿ ಮಂತ್ರಿಗಳಾದ ಶಿವರಾಜ್ಸಿಂಗ್ ಚೌಹಣ್, ಜಿಲ್ಲೆಯ ಶಾಸಕರುಗಳು ಮತ್ತು ಜಿಲ್ಲಾಧಿಕಾರಿಗಳು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಬಿ.ಎಂ.ಲವ, ಕೆ.ಪಿ.ಬಸಪ್ಪ, ಪದಾಧಿಕಾರಿಗಳಾದ ಅನಂತರಾಮ್, ಸೋಮಶೇಖರ್, ತಾಕೇರಿ ಪ್ರಕಾಶ್ ಇದ್ದರು.









