ಮಡಿಕೇರಿ NEWS DESK ಆ.26 : ಸಂಭವನೀಯ ಪ್ರಾಕೃತಿಕ ವಿಕೋಪದ ಪಟ್ಟಿಯಲ್ಲಿರುವ ದೊಡ್ಡಪುಲಿಕೋಟು ಗ್ರಾಮದ ನದಿ ಪಾತ್ರದಲ್ಲಿ ರೆಸಾರ್ಟ್ ನಿರ್ಮಾಣದ ಪ್ರಯತ್ನಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕರವಂಡ ಲವ ನಾಣಯ್ಯ ಮಾತನಾಡಿ, ದೊಡ್ಡಪುಲಿಕೋಟು ಮತ್ತು ಪೇರೂರು ಗ್ರಾಮದ ಸರಹದ್ದಿನಲ್ಲಿ, ಕಾವೇರಿಯ ಉಪನದಿ “ಕಪ್ಪೊಳೆ”ಯ ಸಮೀಪದಲ್ಲೆ ರೆಸಾರ್ಟ್ ನಿರ್ಮಾಣಕ್ಕೆ ಭರದಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದನ್ನು ಸಂಬಂಧಪಟ್ಟ ಇಲಾಖೆ ತಕ್ಷಣ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಸೆ.20 ರ ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರೆಸಾರ್ಟ್ ನಿರ್ಮಾಣಕ್ಕೆ ಬಲ್ಲಮಾವಟಿ ಗ್ರಾಮ ಪಂಚಾಯ್ತಿ ಆಕ್ಷೇಪಣಾ ರಹಿತ ಪತ್ರವನ್ನು ನೀಡಿಲ್ಲ. ಹೀಗಿದ್ದೂ ಕಾಮಗಾರಿ ನಡೆಯುತ್ತಿದ್ದು, ಸಮೀಪವೇ ಗ್ರಾಮ ವ್ಯಾಪ್ತಿಯ ಸುಮಾರು 250 ಕುಟುಂಬಗಳು, ಶ್ರೀ ಕೋಟೆ ಭಗವತಿ ದೇವಸ್ಥಾನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೆ ನೀರನ್ನೊದಗಿಸುವ ನೈಸರ್ಗಿಕ ನೀರು ಸರಬರಾಜಿನ ಕೇಂದ್ರವಿದೆ. ಒಂದು ವೇಳೆ ರೆಸಾರ್ಟ್ ನಿರ್ಮಾಣವಾದರೆ ಜಲಮೂಲಕ್ಕೆ ದಕ್ಕೆಯಾಗಲಿದೆ ಎಂದು ಆರೋಪಿಸಿದರು. ಉದ್ದೇಶಿತ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿದ್ದಲ್ಲಿ ನಮ್ಮ ಅಭ್ಯಂತರವಿರಲಿಲ್ಲ. ಆದರೆ, ಹೊರ ರಾಜ್ಯದ ವ್ಯಕ್ತಿಯೊಬ್ಬರು ಇದೀಗ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗÀಲೆ ಇದಕ್ಕೆ ಪೂರಕವಾಗಿ ಟ್ರಾನ್ಸ್ ಫಾರ್ಮರ್ ಅಳವಡಿಕೆ ಕಾರ್ಯವು ನಡೆದಿದೆ. ಬೋರ್ವೆಲ್ಗಳನ್ನು ಕೊರೆಯುವ ನಿಟ್ಟಿನ ಪ್ರಯತ್ನಗಳು ನಡೆದಿದೆ. ಈ ಎಲ್ಲಾ ಕಾಮಗಾರಿಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಎಲ್ಲಾ ಕಾರಣಗಳ ಹಿನ್ನೆಲೆ ಗ್ರಾಮ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮದ ಶ್ರೀ ಕೋಟೆ ಭಗವತಿ ದೇವಾಲಯದಲ್ಲಿ ಸಭೆ ಸೇರಿ ರೆಸಾರ್ಟ್ ನಿರ್ಮಾಣ ಕಾಮಗಾರಿಗೆ ಯಾವುದೇ ಪರವಾನಗಿ ನೀಡದಂತೆ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸುವುದಾಗಿ ಲವ ನಾಣಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಲ್ಲಮಾವಟಿ ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಮುಕ್ಕಾಟಿರ ಸುತನ್ ಸುಬ್ಬಯ್ಯ, ಗ್ರಾ.ಪಂ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ತಕ್ಕಮುಖ್ಯಸ್ಥರಾದ ಕರವಂಡ ಎಂ.ಬೋಪಣ್ಣ, ಗ್ರಾಮಸ್ಥರಾದ ಅಪ್ಪಚ್ಚಿರ ಬಿ.ತಮ್ಮಯ್ಯ ಹಾಗೂ ಕರವಂಡ ಅಪ್ಪಣ್ಣ ಉಪಸ್ಥಿತರಿದ್ದರು.










