ಸುಂಟಿಕೊಪ್ಪ, ಆ.28 NEWS DESK : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಷೇತ್ರ ರೈತರ ಹಿತಾಶಕ್ತಿ ಕಾಪಾಡಿಕೊಂಡು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸುತ್ತಾ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಹೇಳಿದರು. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನರೇಂದ್ರ ಮೋದಿ ಭವನದಲ್ಲಿ ಆಯೋಜಿಸಲಾಗಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಕಾಫಿಗೆ ಹೂವು ಮಳೆಯ ಕೊರತೆ ಹಾಗೂ ಇದೀಗ ಅತಿವೃಷ್ಠಿಯಿಂದ ಬೆಳೆಗಾರರ ಫಸಲು ನಷ್ಟವಾಗಿದ್ದು, ಸಹಕಾರ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘವು ಚೆಟ್ಟಳ್ಳಿ ವ್ಯಾಪ್ತಿಯ ವಿವಿಧ ಸಮಾಜಕ್ಕೆ ಹಾಗೂ ಐನ್ಮನೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದು, ರೈತರು ಆರ್ಥಿಕವಾಗಿ ಸದೃಢವಾಗಲು ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ಈ ಹಿಂದೆ ಮನೆಯಲ್ಲಿ ಗಂಡ ಹೆಂಡತಿ ಮಾತ್ರ ಸದಸ್ಯರಾಗುತ್ತಿದ್ದರು. ಈಗ ಆ ಕುಟುಂಬದ ಮಕ್ಕಳನ್ನು ಸದಸ್ಯರನ್ನಾಗಿಸುವ ಮೂಲಕ ಸಂಘದ ಆರ್ಥಿಕವಾಗಿ ಸದೃಢ ರೀತಿಯಲ್ಲಿ ನೆರವು ನೀಡಲಾಗುತ್ತಿದೆ ಎಂದು ಹೇಳಿದರು. ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುತ್ತಿದೆ. ಕೃಷಿ ಸಾಲ, ಗೊಬ್ಬರ ಸಾಲ, ಜಾಮೀನು ಸಾಲ ಅಲ್ಲದೆ 25 ಸ್ವಸಹಾಯ ಸಂಘದ ಮಹಿಳಾ ಸದಸ್ಯರುಗಳಿಗೆ ಸಾಲ ನೀಡುತ್ತಿದ್ದೇವೆ. ಸಕಾಲದಲ್ಲಿ ಸಾಲ ಮರುಪಾವತಿಯಾಗುತ್ತಿದೆ ಎಂದು ಅವರು ಹೇಳಿದರು. ಸಂಘದ ಸದಸ್ಯರಾದ ಅಯ್ಯಂಡ್ರ ರಾಘವಯ್ಯ ಮಾತನಾಡಿ, ಸಂಘದ ಬೆಳೆಗಾರರ ಕಾಫಿ ಗುಣಮಟ್ಟ ಪರಿಶೀಲನೆಗೆ ತೇವಾಂಶ ಯಂತ್ರ ಅಳವಡಿಸಿದ್ದು, ಸದಸ್ಯರುಗಳಿಗೆ ಪ್ರಯೋಜನವಾಗಿದೆ. ಕಾಫಿ ಕೊಯ್ಲು ಸಂದರ್ಭದಲ್ಲಿ ಬೆಳೆಗಾರರು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಎಲ್ಲರಿಗೂ ಸಕಾಲದಲ್ಲಿ ಪ್ರಯೋಜನ ಲಭಿಸುತ್ತಿಲ್ಲ ಇದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಿ, ಕಾಫಿ ಮಂಡಳಿಗೆ ಚಿಕ್ಕಮಗಳೂರಿನ ಬೆಳೆಗಾರರನ್ನೇ ಕೇಂದ್ರದ ಸರಕಾರ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಸ್ವಾಗತಾರ್ಹ ಅವರನ್ನು ಈ ಸಂಘಕ್ಕೆ ಕರೆಯಿಸಿ ಬೆಳೆಗಾರರ ವಿಚಾರ ಗೋಷ್ಠಿ ನಡೆಸಬೇಕೆಂದು ಅವರು ಸಲಹೆಯಿತ್ತರು. ಸಂಘದ ಉಪಾಧ್ಯಕ್ಷ ಪೂಣ್ಣಚ್ಚ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ನಿರ್ದೇಶಕರುಗಳಾದ ಬಿ.ಎಂ.ಕಾಶಿ, ಮುಳ್ಳಂಡ ಮಾಯಮ, ಕೊಂಗೇಟಿರ ವಾಣಿ ಕಾಳಪ್ಪ, ಪುತ್ತೇರಿರ ಶಿವುನಂಜಪ್ಪ, ಅಕ್ಕಾರಿ ದಯಾನಂದ, ಬಟ್ಟೀರ ವೇಣುಗೋಪಾಲ್, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ, ಪಿ.ಟಿ.ಗಣೇಶ, ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ, ಆರ್ಥಿಕ ಬ್ಯಾಮಕ್ ಪ್ರತಿನಿಧಿ ಮಮತ, ಲೆಕ್ಕಪರಿಶೋಧಕರಾದ ಚಂದ್ರಶೇಖರ್ ಇದ್ದರು. ನಂದಿನಿ ಪ್ರಾರ್ಥಿಸಿ, ಪೇರಿಯನ ಪೂಣ್ಣಚ್ಚ ವಂದಿಸಿದರು.









