
ಮಡಿಕೇರಿ NEWS DESK ಆ.28 : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯ ದೊರೆಯುತ್ತಿದೆ ಎಂದು ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಂದ್ರೀರ ಜಿ.ಮೋಹನ್ ದಾಸ್ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಿತಿಯ ಸದಸ್ಯರು ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಹೋಬಳಿ ಮಟ್ಟದಲ್ಲಿ ಕುಂದುಕೊರತೆ ಸಭೆಯನ್ನು ನಡೆಸಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಸದಸ್ಯರು ಮುಂದಾಗಬೇಕು. ಈ ಪ್ರಯತ್ನಕ್ಕೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಪಡೆಯಲಾಗುವುದು ಎಂದು ತಿಳಿಸಿದರು.
::: ಗೃಹಲಕ್ಷ್ಮಿ ಯೋಜನೆ :::
ಶಿಶು ಅಭಿವೃದ್ದಿ ಇಲಾಖಾ ಅಧಿಕಾರಿ ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 37,930 ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ಇದರಲ್ಲಿ ಒಟ್ಟು 30,551 ಕುಟುಂಬಗಳು ಗೃಹಲಕ್ಷ್ಮಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 30,380 ಕುಟುಂಬಗಳಿಗೆ ಡಿ.ಬಿ.ಟಿ ಮೂಲಕ ಹಣವನ್ನು ನೇರವಾಗಿ ಖಾತೆಗೆ ಹಣ ಜಮೆ ಮಾಡಲಾಗಿದೆ. ಉಳಿದ 171 ಕುಟುಂಬಸ್ಥರ ಪೈಕಿ 34 ಕುಟುಂಬಗಳು ಜಿ.ಎಸ್.ಟಿ ಪಾವತಿದಾರರು, 35 ಮರಣ ಹೊಂದಿರುವವರು, 8 ಪಡಿತರ ಚೀಟಿಯಲ್ಲಿ ಯಜಮಾನ ಎಂದು ನಮೂದಾಗಿ ಇಕೆವೈಸಿ ಮಾಡಿಸಲು ಬಾಕಿದಾರರು, 4 ಆಧಾರ್ ಶೀಡಿಂಗ್ ಮಾಡಿಸದೇ ಇರುವವರು ಇದ್ದಾರೆ. 81 ಕುಟುಂಬಸ್ಥರ ಬ್ಯಾಂಕ್ ಪಾಸ್ ಪುಸ್ತಕದಲ್ಲಿರುವ ಹೆಸರು, ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ನಲ್ಲಿ ಇರುವ ಹೆಸರಿಗೂ ಹೊಂದಾಣಿಕೆಯಾಗದೆ ಇರುವುದರಿಂದ ಹಣ ಪಾವತಿಯಾಗಿಲ್ಲ. ಇವರುಗಳು ಹೆಸರು ತಿದ್ದುಪಡಿ ಮಾಡಿಸಿದಲ್ಲಿ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
::: ಅನ್ನಭಾಗ್ಯ ಯೋಜನೆ :::
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿ ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38,000 ಅರ್ಹ ಕಾರ್ಡುದಾರರು ಇದ್ದಾರೆ. ಅಂತ್ಯೋದಯ ಪಡಿತರ ಚೀಟಿದಾರರು 2042, ಬಿಪಿಎಲ್ 22,851 ಮತ್ತು 13,994 ಎಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಇವರಲ್ಲಿ 456 ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಬಾಕಿದಾರರಾಗಿರುತ್ತಾರೆ. ಇಕೆವೈಸಿ ಮಾಡುವ ಸಂದರ್ಭ ಬ್ಯಾಂಕ್ ಪಾಸ್ ಪುಸ್ತಕ, ಬಯೋ ಮೆಟ್ರಿಕ್ ಮಿಸ್ ಮ್ಯಾಚ್ ಆಗಿರುವುದನ್ನು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ. ಕುಟುಂಬದ ಯಜಮಾನರ ಹೆಸರನ್ನು ತಿದ್ದುಪಡಿ ಮಾಡಿಸಲು ಅವಕಾಶವಿದೆ. 412 ಬಿಪಿಎಲ್ ಪಡಿತರ ಚೀಟಿಗಳು ಅನರ್ಹವಾಗಿವೆ ಎಂದು ತಿಳಿಸಿದರು.
::: ಗೃಹಜ್ಯೋತಿ ಯೋಜನೆ :::
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖಾ ಅಧಿಕಾರಿ ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 44,000 ಮನೆಗಳು ಇದ್ದು ಇದರಲ್ಲಿ ಇಲಾಖೆಯ ಗುರಿಯಂತೆ ಒಟ್ಟು 40217 ಕುಟುಂಬಗಳು ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. 1214 ಕುಟುಂಬಗಳು 200 ಯೂನಿಟ್ಗಿಂತ ಹೆಚ್ಚು ಬಳಕೆದಾರರಾಗಿರುತ್ತಾರೆ ಎಂದರು. ಕೆಲವು ಮನೆಗಳಿಗೆ ಉಚಿತ ಸೌಲಭ್ಯವನ್ನು ಪಡೆಯಲು ವಿದ್ಯುತ್ ಮೀಟರ್ ಗೆ ನೀಡಿರುವ ಮೊಬೈಲ್ ಸಂಖ್ಯೆಗೂ, ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ಸಂಖ್ಯೆಗೂ ವ್ಯತ್ಯಾಸ ಇರುವುದರಿಂದ ಸೌಲಭ್ಯ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
::: ಶಕ್ತಿ ಯೋಜನೆ :::
ಕೆಎಸ್ಆರ್ಟಿಸಿ ಅಧಿಕಾರಿ ಮಾತನಾಡಿ ಶಕ್ತಿ ಯೋಜನೆಯು ಎಲ್ಲಾ ವರ್ಗದ ಮಹಿಳೆಯರಿಗೆ ಜಾರಿಯಲ್ಲಿದ್ದು, ಅಂತರ್ ರಾಜ್ಯಕ್ಕೆ ತೆರಳುವ ಕೆಎಸ್ಆರ್ಟಿಸಿ ಮತ್ತು ರಾಜಹಂಸ ಬಸ್ ಗಳಲ್ಲಿ ಸೇವೆ ಇರುವುದಿಲ್ಲ ಎಂದರು. ಕೆಲವು ಸದಸ್ಯರು ಮಾತನಾಡಿ ಪೆರಾಜೆ ವ್ತಾಪ್ಯಿಯಲ್ಲಿ ಎಲ್ಲಾ ಘಟಕದ ಬಸ್ ಗಳ ನಿಲುಗಡೆಗೆ ಆದೇಶವಿದ್ದರೂ ನಿಲುಗಡೆಗೊಳ್ಳುತ್ತಿಲ್ಲ. ಈ ಬಗ್ಗೆ ಟಿಸಿ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಮುಕ್ಕೋಡ್ಲು ಗ್ರಾಮಕ್ಕೆ ಬೆಳಿಗ್ಗೆ 7.30 ಗಂಟೆಗೆ ಬರುವ ಸರ್ಕಾರಿ ಬಸ್ ಮಡಿಕೇರಿಯ ಬಸ್ ನಿಲ್ದಾಣಕ್ಕೆ ತೆರಳದೆ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮಾತ್ರ ಬಂದು ಡಿಪೋಗೆ ತೆರಳುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
::: ಯುವನಿಧಿ :::
ಮಡಿಕೇರಿ ತಾಲ್ಲೂಕಿನಲ್ಲಿ ಈ ಯೋಜನೆಯಡಿಯಲ್ಲಿ ಒಟ್ಟು 571 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ 309 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಉಳಿದ 262 ಮಂದಿ ವಿವಿಧ ಕಾರಣಗಳಿಂದ ಸೌಲಭ್ಯವನ್ನು ಪಡೆದಿರುವುದಿಲ್ಲ. ಫಲಾನುಭವಿಗಳ ಅಂಕ ಪಟ್ಟಿಯನ್ನು ಪರಿಶೀಲಿಸಿ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸುವಂತೆ ಸರ್ಕಾರದ ಮಾರ್ಗಸೂಚಿ ಇದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಸಮಿತಿಯ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು.









