ಮಡಿಕೇರಿ NEWS DESK ಆ.30 : ಯುನೈಟೆಡ್ ಕೊಡವ ಆರ್ಗನೈಜೇಶನ್- ಯುಕೊ ಸಂಘಟನೆಯ ನಿಯೋಗವು ಇಂದು ಮೈಸೂರಿನಲ್ಲಿ ಕೊಡಗು-ಮೈಸೂರು ಸಂಸದರಾದ ಯದುವೀರ್ ಕೃಷ್ಟದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಮಾಡಿ ‘ಕೊಡವರನ್ನು ಕೇಂದ್ರದ ಹಿಂದುಳಿದ ವರ್ಗ’ಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಸಲ್ಲಿಸಿ ಚರ್ಚೆ ನಡೆಸಿತು. ಯುಕೊ ಅಧ್ಯಕ್ಷ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ, ನಗರದ ‘ಕಾಡ ಕಛೇರಿ’ ಆವರಣದಲ್ಲಿರುವ ಸಂಸದರ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದ ನಿಯೋಗವು, ಕೊಡವ ಜನಾಂಗವು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3 ಎ ಅಡಿಯಲ್ಲಿ ವರ್ಗಿಕರಣಗೊಂಡು ಶೈಸ್ಕಣಿಕ ಹಾಗೂ ಔದ್ಯೋಗಿಕ ಮೀಸಲಾತಿಗೆ ಭಜನರಾಗಿರುತ್ತಾರೆ. ಆದರೆ, ಕೇಂದ್ರದ ಹಿಂದುಳಿದ ವರ್ಗಗಗಳ ಪಟ್ಟಿಯಿಂದ ಕೊಡವರನ್ನು ಕೈಬಿಡಲಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಲ್ಲಿ ಕೊಡವರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡವರನ್ನು ಹಿಂದುಳಿದ ವರ್ಗಗಳ ಕೇಂದ್ರದ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು. ಹಾಗೆಯೇ, ಕೇಂದ್ರ ಸರ್ಕಾರವು ಯು.ಜಿ.ಸಿ ( University Grants commission -UGC) ಸಹಯೋಗದಲ್ಲಿ, ಅಳಿವಿನಂಚಿನಲ್ಲಿರುವ ಭಾಷೆಗಳ ಅಭಿವೃದ್ಧಿ ನಿಟ್ಟಿನಲ್ಲಿ, ದಾಖಲೀಕರಣ, ಅಧ್ಯಯನ ಹಾಗು ಸಂರಕ್ಷಣೆಯ ಧ್ಯೇಯದೊಂದಿಗೆ ಪ್ರಾರಂಭಿಸಿರುವ ಎಸ್.ಪಿ.ಪಿ.ಪಿ.ಇ.ಎಲ್(SPPEL) ಹಾಗೂ ಅಸ್ಮಿತ(ASMITA) ಎಂಬ ಎರಡು ಯೋಜನೆಗಳನ್ನು ಪ್ರಾರಂಭಿಸಿದ್ದು, ಈ ಯೋಜನೆಗೆ ಯುನೆಸ್ಕೋ ವರದಿಯ ಆಧಾರದಲ್ಲಿ ಅಳಿವಿನಂಚಿನಲ್ಲಿರುವ ಕೊಡವ ಜನಾಂಗವು ಅರ್ಹತೆಯನ್ನು ಹೊಂದಿದ್ದು, ಈ ಯೋಜನೆಗೆ ಕೊಡವ ಭಾಷೆಯನ್ನು ಪರಿಗಣಿಸುವಂತೆಯೂ ಸಂಸದರೊಂದಿಗೆ ಚರ್ಚಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಸಂಧರ್ಭ ಹಾಜರಿದ್ದ ಕೊಡಗು ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ಹಾಲಿ ಎಂ.ಎಲ್.ಸಿ ಅಡಗೂರು ಎಚ್. ವಿಶ್ವನಾಥ್ ಮಾತನಾಡಿ, ಕೊಡವರ ಐತಿಹಾಸಿಕ ಹಿನ್ನೆಲೆ, ದೇಶಕ್ಕೆ ಕೊಡವರ ಕೊಡುಗೆ ಹಾಗೂ ಕೊಡವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸಂಸದರಿಗೆ ಮಾಹಿತಿ ನೀಡಿದರು. ನಿಯೋಗದಲ್ಲಿ, ಚೆಪ್ಪುಡಿರ ಸುಜು ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಜಿನಿಕಂಡ ಸೂರಜ್ ತಿಮ್ಮಯ್ಯ, ಮಚ್ಚಾಮಾಡ ಅರುಣ ಸೋಮಯ್ಯ, ರಮೇಶ್, ಬೊಳಿಯಂಗಡ ಬೋಪಣ್ಣ, ಪುದಿಯೊಕ್ಕಡ ದಿನೇಶ್, ತೀತಿಮಾಡ ಬೋಸ್ ಅಯ್ಯಪ್ಪ, ಪೊಂಜಂಡ ಗಿರಿ, ಚಿರಿಯಪಂಡವಿಶು ಕಾಳಪ್ಪ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಕಳ್ಳಿಚಂಡ ದೀನ ಉತ್ತಪ್ಪ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಹಾಜರಿದ್ದರು.










