ಮಡಿಕೇರಿ ಸೆ.3 NEWS DESK : ಪರೋಪಕಾರ ಹಿತ ಎಂಬಂತೆ ಪ್ರಕೃತಿಯ ಮರ, ಗಿಡ, ನದಿ, ಸರೋವರ, ಪಾಣಿ, ಪಕ್ಷಿ ಎಲ್ಲಾವು ಇತರರ ಸೇವೆಗಾಗಿಯೇ ಇವೆ. ಮಾನವ ಮಾತ್ರ ಸ್ವಾರ್ಥ ಜೀವನ ಸಾಗಿಸುತ್ತಿದ್ದಾನೆ. ವಿದ್ಯಾರ್ಥಿಗಳು ಇದರಿಂದ ದೂರವಾಗಿ ಇತರರ ಸೇವೆಗೆ ಮುಡಿಪಾಗಿರಬೇಕು ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ.ಕಾವೇರಿಯಪ್ಪ ಹೇಳಿದರು. ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಎನ್.ಎಸ್.ಎಸ್ ಘಟಕದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎನ್.ಎಸ್.ಎಸ್ ಘಟಕದ ಮೂಲಕ ಸಮಾಜ ಸೇವೆಗೆ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ನಮ್ಮ ಬದುಕು ಪರೋಪಕಾರಿಯಾಗಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಕಾವೇರಿ ಪ್ರಕಾಶ್, ವಿದ್ಯಾರ್ಥಿಗಳು ಗುರುಗಳಿಗೆ ಗೌರವ ಕೊಡುವುದನ್ನು ಎಂದಿಗೂ ಮರೆಯಬಾರದು. ಸಮಾಜ ಸೇವಾ ಮನೋಭಾವ ಬೆಳೆಸಿಕೊಂಡರೇ ಮಾತ್ರ ಇತರರ ಭಾವನೆಗೆ ಸ್ಪಂದನೆ ನೀಡಲು ಸಾಧ್ಯ ಎಂದು ತಿಳಿಸಿದರು. ಕರ್ನಾಟಕ ಆರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯ ವಿನೋದ್ ಮೂಡಗದ್ದೆ ಮಾತನಾಡಿ, ಎನ್.ಎಸ್.ಎಸ್ ಸಮಾಜಸೇವೆ ಜೊತೆಗೆ ಶಿಸ್ತು, ಸಮಯ ಪ್ರಜ್ಞೆ, ವ್ಯಕ್ತಿತ್ವ ವಿಕಸನ ಮುಂತಾದವುಗಳನ್ನು ಕಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಎನ್.ಎಸ್.ಎಸ್ ಅನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ.ನಯನ ತಮ್ಮಯ್ಯ, ಎನ್.ಎಸ್.ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಮತ್ತು ಎನ್.ಪಿ.ರೀತಾ ಹಾಜರಿದ್ದರು.









