



ನಾಪೋಕ್ಲು ಜ.27 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಸಂಯುಕ್ತಾಶ್ರಯದಲ್ಲಿ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕದತ್ತಿ ಮತ್ತು ಎಸ್ ಎಸ್ ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಾಪೋಕ್ಲವಿನ ಎಕ್ಸೆಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿ.ಕೆ.ತಿಮ್ಮಯ್ಯ ಮಾತನಾಡಿ, ಕೊಡಗಿನ ಸಾಹಿತಿಗಳು ಹಾಗೂ ವೀರಸೇನಾನಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾರ್ಯಪ್ಪ ಅವರ ಕುರಿತು ಉಪನ್ಯಾಸ ನೀಡಿದರು. ಅಲ್ಲದೇ ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ರಸಪ್ರಶ್ನೆಯನ್ನು ಕೇಳಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ಇದೇ ಶಾಲೆಯಲ್ಲಿ ಕೋಟ್ಯಾಧಿಪತಿ ಎನ್ನುವ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ತಿಳಿಸಿದರು. ಶಿಕ್ಷಕಿ ಕೆ.ಡಿ.ಶೋಭಿತ ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ ಕುರಿತು ವಿವರಿಸಿದರು. ಕನ್ನಡ ಸಾಹಿತ್ಯದ ಪ್ರಾಚೀನತೆ ಕ್ರಿಸ್ತಶಕ 8 ರಿಂದ 9ನೇ ಯ ಶತಮಾನಕ್ಕೆ ಮೊದಲು ಸಾಹಿತ್ಯಕ ಸಾಕ್ಷಿಗಳು ಇಲ್ಲದಿರುವುದರಿಂದ ಕನ್ನಡ ಸಾಹಿತ್ಯದ ಪ್ರಾರಂಭ ಅಸ್ಪಷ್ಟತೆಯಲ್ಲಿ ಮುಚ್ಚಿಹೋಗಿದೆ ಏಕೆಂದರೆ ಕೆಲವೇ ಶಾಸನ ಪುರಾವೆಗಳು ಲಭ್ಯವಿದ್ದು, ಇತಿಹಾಸದ ಪ್ರಾರಂಭಿಕ ಹಂತಗಳಿಗೆ ಸೇರಿದ ಬಹುತೇಕ ಶಾಸನಗಳನ್ನು ಬ್ರಾಹ್ಮಿ ಲಿಪಿ ಹಾಗೂ ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ. ಅವುಗಳಲ್ಲಿ ಬಹು ಪಾಲು ವೀರರಿಗೆ ಗೌರವ ಸಲ್ಲಿಸುವ ಕಿರು ಸ್ಮಾರಕ ದಾಖಲೆಗಳಾಗಿವೆ ಎಂದರು. ಹಲ್ಮಿಡಿ ಶಾಸನ, ಪ್ರಾರಂಭಿಕ ಸಾಹಿತ್ಯ ಕೃತಿಗಳು, ವಿರೋಚಿತ ಹಾಗೂ ಮಹಾಕಾವ್ಯದ ಯುಗ, ಧಾರ್ಮಿಕ ಪ್ರಚಾರದ ಯುಗ, ಪ್ರತಿಭಟನಾ ಯುಗ, ವೈಭವದ ಯುಗ, ಪುನರು ಜೀವನ ಯುಗ, ಹಳೆ ಹಾಗೂ ನಡುಗನ್ನಡ ಸಾಹಿತ್ಯ, ನವೋದಯ, ಮಕ್ಕಳ ಸಾಹಿತ್ಯ, ಜಾನಪದ ಸಾಹಿತ್ಯ, ಕನ್ನಡ ಭಾಷಾಭಿವೃದ್ಧಿ, ನವ್ಯ ಕಾವ್ಯದ ಕಾಲ, ದಲಿತ ಮತ್ತು ಬಂಡಾಯ ಸಾಹಿತ್ಯ, ಆಧುನಿಕ ಸಾಹಿತ್ಯ ಮತ್ತು ಪ್ರತಿಭಟನೆ, ಕನ್ನಡ ಕಾವ್ಯದ ಸುವರ್ಣ ಯುಗ ಸೇರಿದಂತೆ ಹಳೆಗನ್ನಡ ಮತ್ತು ಹೊಸಗನ್ನಡದ ಕವಿವರ್ಯರ ಕುರಿತು ವಿದ್ಯಾರ್ಥಿಗಳ ಮನಮುಟ್ಟುವಂತೆ ಉಪನ್ಯಾಸ ನೀಡಿದರು. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಪ್ರಾಥಮಿಕವಾಗಿ ಮಾತನಾಡಿ, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆ ಹಾಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದ ನೆನಪಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪನೆ ಮಾಡಿರುವ ದತ್ತಿ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಪರಿಷತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ದತ್ತಿ ಕಾರ್ಯಕ್ರಮಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರ ಸೂಸಲು ಉತ್ತಮ ವೇದಿಕೆ ಸಿಕ್ಕಂತ್ತಾಗಿದೆ. ಆದುದರಿಂದ ದತ್ತಿ ಸ್ಥಾಪನೆ ಮಾಡಲು ಕಾರಣ ಬೇಕಾಗಿಲ್ಲ ಕನ್ನಡದ ಬಗ್ಗೆ ಒಲವಿದ್ದರೆ ಸಾಕು ಎಂದರು. ಇದೇ ಸಂದರ್ಭ ಶಾಲೆಯ ಪ್ರತಿಯೊಬ್ಬ ಶಿಕ್ಷಕರರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದಕ್ಕಾಗಿ ಅಭಿನಂದಿಸಿದರು. ಶಾಲೆಯ ವಕ್ತಾರ ವಿದ್ಯಾ ಸುರೇಶ್ ಕಾರ್ಯಕ್ರಮವನ್ನು ದೀಪ ಉದ್ಘಾಟಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕ ಚೋಕಿರ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ವಿ.ಪ್ರಭಾಕರ, ನಾಪೋಕ್ಲು ಹೋಬಳಿ ಗೌರವ ಕಾರ್ಯದರ್ಶಿ ಉಮಾ ಪ್ರಭು, ನಿವೃತ್ತ ಶಿಕ್ಷಕಿ ಅಮೆ ಭವಾನಿ, ಶಾಲಾ ಶಿಕ್ಷಕವೃಂದ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ಎಂ.ಶರಣ್ಯ ಸ್ವರಚಿತ ಕವನ ವಾಚಿಸಿದರು. ಶಿಕ್ಷಕಿ ಬಿ.ಸಿ.ರಶ್ಮಿ ಸ್ವಾಗತಿಸಿದರು, ಬಿ.ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಾಳೆಯಡ ದಿವ್ಯ ಮಂದಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ









