



ಕುಶಾಲನಗರ ಫೆ.7 NEWS DESK : ಸ್ವಾಮಿ ವಿವೇಕಾನಂದ ಯುವ ಒಕ್ಕೂಟಗಳ ರಾಜ್ಯ ಸಮಿತಿ ವತಿಯಿಂದ ಮುದ್ದೇಬಿಹಾಳದ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಕೊಡಮಾಡಿದ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಯನ್ನು ಕೊಡಗು ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಸಾಹಿತ್ಯಪರ ಸಂಘಟನೆಗಳ ಸಂಚಾಲಕ ಕೆ.ಎಸ್.ಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು. ಬಿಜಾಪುರ ಜಿಲ್ಲೆಯ ಸಿದ್ಧನ ಕೊಳ್ಳದ ನಿರಂತರ ದಾಸೋಹ ಮಠದ ಪೀಠಾಧಿಪತಿ ಡಾ.ಶಿವಕುಮಾರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸರ್ಕಾರದ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ, ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಚಲನ ಚಿತ್ರ ನಟ ಡಾ.ಗುರುರಾಜ ಹೊಸಕೋಟೆ, ಕಿತ್ತೂರು ಕರ್ನಾಟಕ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ರಾಂಪುರ, ಸ್ವಾಮಿ ವಿವೇಕಾನಂದ ಯುವ ಒಕ್ಕೂಟಗಳ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ, ಬಿಜಾಪುರದ ಅಕ್ಕಮಹಾದೇವಿ ವಿವಿ ಕುಲಪತಿ ಡಾ.ಶಂಕರೇಗೌಡ ಎಸ್.ಸೋಮನಾಳ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಹೊರರಾಜ್ಯದ ಐವರು ಸಾಧಕರೂ ಸೇರಿದಂತೆ ರಾಜ್ಯದ ಮುವತ್ತು ಮಂದಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಸಲಾಯಿತು.