

ನಾಪೋಕ್ಲು ಏ.12 NEWS DESK : ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ರಜಾ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಿವೃತ ಏರ್ ಪೋರ್ಸ್ ಅಧಿಕಾರಿ ಕೊಂಡಿರ ಗಣೇಶ್ ನಾಣಯ್ಯ ಹೇಳಿದರು. ನಾಪೋಕ್ಲು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 25ನೇ ವರ್ಷದ ಹಾಕಿ ಹಾಗೂ ಇನ್ನಿತರ ಬೇಸಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯರಾದ ದಿ.ಕಲಿಯಂಡ ಸಾಬು ಅಯ್ಯಣ್ಣ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾ ಅಕಾಡಮಿ ಸ್ಥಾಪಿಸಿದ ಬಳಿಕ 25 ವರ್ಷಗಳಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬರಲಾಗುತ್ತಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಸ್ಥಾನ ಹೊಂದಿದ್ದಾರೆ. ಹಲವು ಕ್ರೀಡಾಪಟುಳಾಗಿಗಳು ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳ ಏಳಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ. ತರಬೇತುದಾರರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಅಭ್ಯಾಸದ ವೇಳೆ ಉತ್ತಮ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉನ್ನತಿಯನ್ನು ಸಾಧಿಸಬೇಕು ಎಂದರು. ಈ ಸಂದರ್ಭ ನುರಿತ ತರಬೇತುದಾರರಾದ ಅಕಾಡೆಮಿಯ ಕಾರ್ಯದರ್ಶಿ, ಮಾಜಿ ಸೈನಿಕ ಕೋಟೋಳಿರ ಡಾಲಿ ಅಪ್ಪಚ್ಚ ಹಾಗೂ ಕ್ರೀಡಾಪಟು ಅರೇಯಡ ಗಣೇಶ್ ಬೆಳ್ಳಿಯಪ್ಪ, ಬಿದ್ದಾಟಂಡ ಮಮತಾ ಚಿನ್ನಪ್ಪ, ಅಕಾಡೆಮಿ ಖಜಾಂಚಿ ಮಾಚೇಟಿರ ಕುಸು ಕುಶಾಲಪ್ಪ, ಅಕಾಡೆಮಿ ನಿರ್ದೇಶಕರಾದ ಕುಂಚೆಟ್ಟಿರ ಸುಧಿ, ದುಗ್ಗಳ ಸದಾನಂದ ಹಾಗೂ ಕ್ರೀಡಾ ಅಕಾಡೆಮಿ ಪದಾಧಿಕಾರಿಗಳು, ಪೋಷಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಇತ್ತೀಚೆಗೆ ನಿಧನರಾದ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಅವರಿಗೆ ಶಿಬಿರದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವರದಿ : ದುಗ್ಗಳ ಸದಾನಂದ.