




ಮೈಸೂರು ಮೇ 10 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹುಣಸೂರು ಮತ್ತು ಪಿರಿಯಾ ಪಟ್ಟಣದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಗಾರರು ಇದ್ದು, ಅವರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು, ಬೆಳಗಾರರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂಬುದೇ ನಮ್ಮ ಮುಖ್ಯ ಗುರಿ ಎಂದು ತಿಳಿಸಿದ್ದಾರೆ. ತಂಬಾಕು ಬೆಳೆಗಾರರಿಗೆ ನಿರಂತರವಾಗಿ ರಸಗೊಬ್ಬರ ಪೂರೈಸಲಾಗುತ್ತಿತ್ತು. ರೈತರಿಗೆ ಅನುಕೂಲವಾಗಲೆಂದು ಈ ಭಾನುವಾರವೂ ಅಂದರೆ ಮೇ 11ರಂದು ರಸಗೊಬ್ಬರ ಪೂರೈಕೆ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ತಂಬಾಕು ಬೆಳೆಗಾರರು ಭಾನುವಾರವೂ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಯದುವೀರ್ ತಿಳಿಸಿದ್ದಾರೆ. ತಂಬಾಕು ಬೆಳೆಗಾರರ ಪರ ಸಂಸದರ ದನಿ :: ತಂಬಾಕು ಬೆಳಗಾರರ ಪರವಾಗಿ ಸಂಸತ್ತಿನ ಅಧಿವೇಶನದಲ್ಲಿ ದನಿ ಎತ್ತಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಹೆಚ್ಚುವರಿ ದಂಡ ರದ್ದು ಮಾಡಿಸಿದ್ದ ಸಂಸದ ಯದುವೀರ್ ಈಗ ಬೆಳಗಾರರಿಗೆ ಅಗತ್ಯ ರಸಗೊಬ್ಬರ ಸಕಾಲಕ್ಕೆ ಪೂರೈಕೆಯಾಗುವಂತೆ ನೋಡಿಕೊಂಡಿದ್ದಾರೆ. ಸಂಸದರ ಈ ನಡೆಗೆ ತಂಬಾಕು ಬೆಳಗಾರರ ಒಕ್ಕೂಟಗಳು ಅಭಿನಂದನೆ ಸಲ್ಲಿಸಿವೆ.