
ಮಡಿಕೇರಿ ಜೂ.16 NEWS DESK : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕೊಡಗು ಬಿಜೆಪಿ ವತಿಯಿಂದ ಜಿಲ್ಲಾದ್ಯಂತ ಆ.15ರ ವರೆಗೆ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಡಿಕೇರಿಯ ಬನ್ನಿ ಮಂಟಪದ ಬಳಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 11 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಕಲ್ಪದಿಂದ ಸಿದ್ದಿ ಎಂಬ ಜನಸಂಪರ್ಕ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ಇದನ್ನು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕಾರ್ಯಕ್ರಮ ಆರಂಭಿಸಲಾಗಿದೆ. ಮಡಿಕೇರಿ ನಗರ, ಮಂಡಲ ವತಿಯಿಂದ ದಿನಕ್ಕೊಬ್ಬ ಕಾರ್ಯಕರ್ತ ಗಿಡ ನೆಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದರು. ಮಡಿಕೇರಿ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ ಮಾತನಾಡಿ, ಕಳೆದ 11 ವರ್ಷಗಳ ಆವಧಿಯಲ್ಲಿ ಪ್ರಧಾನಿ ಮೋದಿ ಶೇ.85ರಷ್ಟು ಆಶ್ವಾಸನೆಯನ್ನು ಈಡೇರಿಸಿದ್ದಾರೆ. ಅದನ್ನು ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ ಎಂದ ಅವರು, ಮಡಿಕೇರಿ ಮಂಡಲದ 23 ವಾರ್ಡ್ಗಳಲ್ಲೂ ಪ್ರತಿನಿತ್ಯ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಪಕ್ಷದ ಜಿಲ್ಲಾ ಖಜಾಂಚಿ ಕನ್ನಂಡ ಸಂಪತ್, ನಗರಸಭೆ ಸದಸ್ಯೆ ಸವಿತಾ ರಾಕೇಶ್, ನಗರ ಮಂಡಲ ಕಾರ್ಯದರ್ಶಿ ಬಿ.ಎಂ.ಹರೀಶ್, ಪ್ರಮುಖರಾದ ಜೀವನ್, ಬೊಳ್ಳಜಿರ ಬಿ.ಅಯ್ಯಪ್ಪ, ರಾಕೇಶ್ ಅನ್ವೇಕರ್, ಬಸವರಾಜು, ರಾಜೇಶ್, ನವ್ಯ ರಾಜೇಶ್, ಗಜೇಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.










